ಬೆಂಗಳೂರು: ಕಳೆದ ವಾರದಿಂದ ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಮಳೆ ಜೋರಾಗಿ ಬರುತ್ತಿತ್ತು.
ಆದರೆ ಇಂದು ಬೆಂಗಳೂರಿಗೆ ಮಳೆರಾಯ ವಿಶ್ರಾಂತಿ ಪಡೆದಿದ್ದಾನೆ. ಆದರೆ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಮಂಗಳವಾರ ಧಾರಾಕಾರ ಮಳೆಯಾಗಿದೆ. ಇದರಿಂದ ಬಿಸಿಲಿಗೆ ಬಸವಳಿದಿದ್ದ ಈ ಜಿಲ್ಲೆಗಳ ಜನರು ತಂಪಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಮುಂದಿನ ವಾರ ಪೂರ್ತಿ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಉಡುಪಿಯಲ್ಲಿ ಭರ್ಜರಿ ಮಳೆ: ಸಿಡಿಲಿಗೆ ಓರ್ವ ಬಲಿ!
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇಂದು ಮಂಗಳವಾರ ಧಾರಾಕಾರ ಮಳೆ ಬಂದಿದ್ದು, ನಗರ ಸೇರಿದಂತೆ ಮಣಿಪಾಲ, ಮಲ್ಪೆ, ಸಂತೆಕಟ್ಟೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ 3 ತಿಂಗಳಿನಿಂದ ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನತೆ ಮಳೆರಾಯನ ಆಗಮನದಿಂದ ಸಂತಸಗೊಂಡಿದ್ದಾರೆ. ಇತ್ತ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಸಿಡಿಲು ಬಡಿದು ಸುರೇಶ್ ಶೆಟ್ಟಿ(38) ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದಾಗ ದುರ್ಘಟನೆ ನಡೆದಿದ್ದು, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಕನ್ನಡದ ಹಲವೆಡೆ ಮಳೆ
ಇದೇ ರೀತಿ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲೂಕುಗಳಲ್ಲಿ ಇಂದು ಮಂಗಳವಾರ ಭಾರಿ ಮಳೆ ಸುರಿದಿದ್ದು, ಗುಡುಗು ಸಹಿತ ಅಬ್ಬರದ ಮಳೆಗೆ ಭೂಮಿ ತಂಪಾಗಿದೆ. ಇದರಿಂದ ಮಳೆಗಾಗಿ ಕಾದು ಕೂತಿದ್ದ ರೈತರಿಗೆ ವರುಣ ಸಂತಸ ತಂದಿದ್ದಾನೆ. ಇತ್ತ ಕಾರವಾರ,ಯಲ್ಲಾಪುರ, ಮುಂಡಗೋಡು ತಾಲ್ಲೂಕುಗಳಲ್ಲಿ ಬಿಸಿಲಿನ ತಾಪ ಮುಂದುವರೆದಿದ್ದು, ಈ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಜೊತೆಗೆ ಹವಾಮಾನ ಇಲಾಖೆಯಿಂದ ಇನ್ನೂ 3 ದಿನ ಜಿಲ್ಲೆಯ ವಿವಿಧೆಡೆ ಮಳೆ ಆಗುವ ಮುನ್ಸೂಚನೆ ನೀಡಿದೆ.
ಶಿರಸಿ ಪಟ್ಟಣದಲ್ಲಿ ಧರೆಗುರುಳಿದ ಮರಗಳು, ವಿದ್ಯುತ್ ಕಂಬ
ಇತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಧಾರಾಕಾರ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿದೆ. ಇದರಿಂದ ಶಿರಸಿ ಪಟ್ಟಣದ ಸಹ್ಯಾದ್ರಿ ಕಾಲೋನಿಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಜೊತೆಗೆ 10ಕ್ಕೂ ಹೆಚ್ಚು ಕಂಬಗಳು ಉರುಳಿಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಎಂದಿನಂತೆ ಇಂದು ಚಿಕ್ಕಮಗಳೂರಿನಲ್ಲೂ ಬಿರುಗಾಳಿ ಸಹಿತ ಮಳೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗಿದೆ. ಕಳೆದ ಒಂದು ಗಂಟೆಯಿಂದ ಗಾಳಿ ಜೊತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಶೃಂಗೇರಿ ಶಾರದಾ ಮಠದ ಮುಂಭಾಗದಲ್ಲಿದ್ದ ನಾಮಫಲಕ ಹಾರಿಹೋಗಿದೆ. ಇತ್ತ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಪ್ರವಾಸಿಗರು ಕೂಡ ಆತಂಕಗೊಂಡಿದ್ದಾರೆ.
ಶಿವಮೊಗ್ಗದಲ್ಲಿ ಧಾರಾಕಾರ ಮಳೆ
ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಗುಡುಗು ಸಹಿತ ಭರ್ಜರಿ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮಳೆಯು ಕಣ್ಣು ಮುಚ್ಚಾಲೆ ಆಟವಾಡುತ್ತಿತ್ತು. ಇಂದು ಕೊನೆಗೂ ನಗರದಲ್ಲಿ ಮಳೆ ಬಿದ್ದಿದೆ. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇತ್ತ ಮಳೆಯಿಂದ ಶಿವಮೊಗ್ಗ ನಗರದ ಜನರಲ್ಲಿ ಸಂತಸ ಮನೆಮಾಡಿದೆ.