ಬೆಳಗಾವಿ: ಸ್ಮಶಾನಕ್ಕೆ ದಾರಿ ಕೊಡಿಸದ ತಾಲೂಕು ಆಡಳಿತದ ನೀತಿಯನ್ನು ಖಂಡಿಸಿ, ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನAಠ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲದಿರುವ ಬಗ್ಗೆ ಅನೇಕ ಸಲ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಆದರೆ, ತಾಲೂಕು ಆಡಳಿತ ಈವರೆಗೆ ಸರಿಯಾಗಿ ಸ್ಪಂದಿಸದೆ, ಇಂದಿಗೂ ಸ್ಮಶಾನಕ್ಕೆ ದಾರಿ ಮಾಡಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಾವನ್ನಪ್ಪಿದ ವ್ಯಕ್ತಿಯ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗಿದೆ.
ಗ್ರಾಮದ ಸ್ಮಶಾನಕ್ಕೆ ಸರಿಯಾದ ದಾರಿ ಒದಗಿಸಿಲ್ಲ. ಖಾಸಗಿ ಜಮೀನಿನಿಂದ ದಾರಿಯಿದ್ದು, ಖಾಸಗಿಯವರು ದಾರಿಯನ್ನು ಬಂದ್ ಮಾಡಿದ್ದರಿಂದ ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಹೋಗಲು ಗ್ರಾಮಸ್ಥರು ಪರದಾಟ ನಡೆಸಬೇಕಾಗಿತ್ತು. ಈ ಬಗ್ಗೆ ತಹಸೀಲ್ದಾರ್ಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ.
ಹೀಗಾಗಿ, ಸ್ಮಶಾನಕ್ಕೆ ಸೂಕ್ತ ದಾರಿಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಆಡಳಿತ ಗ್ರಾಮಸ್ಥರ ಮನವೊಲಿಸಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಶೀಘ್ರವೇ ದಾರಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.