ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಪ್ರಸಾದದಲ್ಲಿ ಮುಂದಿನ ದಿನಗಳಲ್ಲಿ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನೂ ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.
ದೇಗುಲದ ಭೋಜನ ಪ್ರಸಾದದ ಖಾದ್ಯಗಳ ವಿತರಣೆಯಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಆಡಳಿತಾಧಿಕಾರಿ ಪುತ್ತೂರು ಉಪಾಯುಕ್ತ ಜುಬಿನ್ ಮೊಹಪಾತ್ರ ಅವರ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿದಿನ ವಿಧವಿಧವಾದ ಪಾಯಸ ಬಡಿಸಲಾಗುತ್ತದೆ.
ದೇಗುಲದಲ್ಲಿ ವಾರ್ಷಿಕವಾಗಿ ಸುಮಾರು 55 ಲಕ್ಷ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸುತ್ತಾರೆ. ವಿಶೇಷ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ, ಇದೀಗ ಪ್ರತಿದಿನ ಬೇರೆ ಬೇರೆ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.
ಹೆಸರು ಬೇಳೆ, ಕಡ್ಲೆ ಬೇಳೆ, ಸಬ್ಬಕ್ಕಿ, ಗೋಧಿ ಕಡಿ, ಕಡ್ಲೆ ಬೇಳೆ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯಗಳ ಪಾಯಸಗಳು ಸೇರಿದಂತೆ ಸುಮಾರು 10 ಬಗೆಯ ಪಾಯಸಗಳ ವ್ಯವಸ್ಥೆ ಮಾಡಲಾಗಿದೆ.