ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಜೈಲು ಕಂಬಿ ಎಣಿಸುತ್ತಿರುವ ನಟ ದರ್ಶನ್ ಅವರ ಮನೆಯೂಟದ ಕೋರಿಕೆಗೆ ಸರಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಜೈಲಿನಲ್ಲಿ ಒಳ್ಳೆಯ ಊಟವನ್ನೇ ಕೊಡುತ್ತೇವೆ ಎಂದು ವಾದ ಮಂಡಿಸಿದೆ.
ನಟ ದರ್ಶನ್ ಮತ್ತು ಸಹಚರರ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಅವರಿಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಣೆಯು ಆಗಿದೆ. ಈ ನಡುವೆ ದರ್ಶನ್ ಸಲ್ಲಿಸಿದ್ದ ಮನೆಯೂಟದ ಬೇಡಿಕೆಯ ಅರ್ಜಿಯನ್ನು ವಿಚಾರಣೆ ನಡೆಸಲಾಯಿತು.
ಮನೆಯೂಟ ನೀಡುವ ಬೇಡಿಕೆಗೆ ಆಕ್ಷೇಪಣೆ ಸಲ್ಲಿಸಿದ ಸರಕಾರ, ಜೈಲಿನಲ್ಲಿ ಉತ್ತಮ ಪೌಷ್ಟಿಕಾಹಾರ ನೀಡುತ್ತಿದ್ದು, ಅವರಿಗೆ ಮನೆಯೂಟದ ಅವಶ್ಯಕತೆ ಇಲ್ಲ. ಜತೆಗೆ, ಅವರು ಐಜಿ ಅವರಿಗೆ ಈ ಕುರಿತು ಮನವಿ ಸಲ್ಲಿಸಬೇಕಿತ್ತು. ಆದರೆ, ಅದ್ಯಾವುದನ್ನು ಮಾಡದೆ, ನೇರವಾಗಿ ನ್ಯಾಯಾಲಯದ ಮುಂದೆ ಬರಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಸರಕಾರ ವಾದಿಸಿತು. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು.