“ಬುಲ್ಡೋಜರ್ ಸಂಸ್ಕೃತಿ”ಗೆ ಬೇಸರ ವ್ಯಕ್ತಪಡಿಸಿದ ಸುಪ್ರಿಂ ಕೋರ್ಟ್
ನವದೆಹಲಿ: ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಮೆಚ್ಚುಗೆಯ ‘ಆಪರೇಷನ್ ಬುಲ್ಡೋಜರ್’ ಕ್ರಮಕ್ಕೆ ಸುಪ್ರಿಂ ಕೋರ್ಟ್ ತಪರಾಕಿ ನೀಡಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರೆ, ಅಂಥವರ ಮನೆ ಕೆಡವಿದರೆ ಹೇಗೆ? ಅದು ಅಕ್ರಮವಾಗಿದ್ದರೆ ಕಾನೂನು ಪ್ರಕಾರ ಕೈಗೊಳ್ಳಬೇಕೇ ವಿನಹಃ, ಶಿಕ್ಷೆ ನೀಡುವುದಲ್ಲ ಎಂದು ಹೇಳಿದೆ.
ಮನೆಗಳ ಮೇಲೆ ಬುಲ್ಡೋಜರ್ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಪೀಠ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲವು ರಾಜ್ಯಗಳಲ್ಲಿ ಆಪರೇಷನ್ ಬುಲ್ಡೋಜರ್ ಕ್ರಮಗಳು ಹೆಚ್ಚಾಗಿವೆ ಎಂಬುದನ್ನು ಗಮನಿಸಿದ ಕೋರ್ಟ್, ಕ್ರಿಮಿನಲ್ ಆರೋಪಿಗಳಾಗಿದ್ದರೆ ಮನೆ ಕೆಡವಲು ಹೇಗೆ ಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.
‘ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಆತನ ಮನೆಯನ್ನು ಕೆಡವಿದರೆ ಹೇಗೆ? ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದು ಕಂಡು ಬಂದರೂ, ಕಾನೂನು ರೀತಿ ಶಿಕ್ಷೆ ನೀಡಬೇಕು. ಅದು ಬಿಟ್ಟು ಆತನ ಮನೆ ಕೆಡುವುದಲ್ಲ. ಹಾಗಂತ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ರಕ್ಷಿಸಬೇಕು ಎಂದಲ್ಲ. ಕಾನೂನು ಪ್ರಕಾರ ಮಾತ್ರ ಕ್ರಮ ಜರುಗಿಸಬೇಕು. ಅಕ್ರಮ ಕಟ್ಟಡ ನೆಲಸಮ ಮಾಡುವ ಬಗ್ಗೆ ಮಾರ್ಗಸೂಚಿ ರೂಪಿಸಬೇಕಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜನರು ಸಲಹೆ ನೀಡಬಹುದು. ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪೀಠ ಸ್ಪಷ್ಟಪಡಿಸಿದೆ.
ಹಲವು ರಾಜ್ಯಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವ ಕಾರ್ಯವನ್ನು ಆಯಾ ಸರ್ಕಾರಗಳು ನಡೆಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಘರ್ಷಣೆ ನಂತರ, ಅಧಿಕಾರಿಗಳು ಅಕ್ರಮವಾಗಿ ನಿರ್ಮಿತ ಕಟ್ಟಡಗಳನ್ನು ಕೆಡವಿದ್ದರು.


