ಬೆಂಗಳೂರು: ಜಾತಿ ನಿಂದನೆ ಮತ್ತು ಜೀವಬೆದರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ನ್ಯಾಯಾಂಗ ಬಂಧನ ನೀಡಿ ಜೈಲಿಗೆ ಕಳಿಸುತ್ತೋ ಅಥವಾ ಪೊಲೀಸ್ ವಶಕ್ಕೆ ನೀಡುತ್ತೋ ಎಂಬ ಕುತೂಹಲ ಹೆಚ್ಚಾಗಿದೆ.
ಗುತ್ತಿಗೆದಾರನಿಗೆ ಜೀವಬೆದರಿಕೆ ಹಾಕಿದ್ದು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಮುನಿರತ್ನ ಬಂಧನ ಮಾಡಲಾಗಿದೆ. ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ.
ಈ ಹಿನ್ನೆಲೆಯಲ್ಲಿ ಪೊಲೀಸರು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮತ್ತೇ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಆದರೆ, ನ್ಯಾಯಾಲಯ ಪೊಲೀಸರ ಮನವಿಗೆ ಸ್ಪಂದಿಸುತ್ತಾ ಅಥವಾ ನ್ಯಾಯಾಂಗ ಬಂಧನಕ್ಕೆ ಕೊಡುತ್ತಾ ಕಾದು ನೋಡಬೇಕಿದೆ.
ಪೊಲೀಸ್ ಕಸ್ಟಡಿಗೆ ನೀಡಿದರೆ, ಮತ್ತೇ ಕೆಲವು ದಿನಗಳ ಕಾಲ ವಿಚಾರಣೆ ನಡೆಯಲಿದೆ. ಈವರೆಗೆ ಮುನಿರತ್ನ ಸರಿಯಾಗಿ ತನಿಖೆಗೆ ಸ್ಪಂದಿಸಿಲ್ಲ ಎಂಬ ಕಾರಣ ನೀಡಿ ಮತ್ತೇ ಪೊಲೀಸರು ಕಸ್ಟಡಿಗೆ ಕೇಳಲಿದ್ದಾರೆ. ಒಂದು ವೇಳೆ ನ್ಯಾಯಾಲಯ ಇದನ್ನು ನಿರಾಕರಿಸಿದರೆ ನ್ಯಾಯಾಂಗ ಬಂಧನಕ್ಕೆ ನೀಡಲಿದ್ದು, ಹಾಗಾದರೆ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಬೇಕಿದೆ.

