ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನೋಂದಣಿ ಮಾಡಿಕೊಂಡಿರುವುದು ಸಾಭೀತಾದಲ್ಲಿ ಅಂತಹ ನೋಂದಣಿಯನ್ನು ರದ್ದುಗೊಳಿಸುವ ಆದೇಶವನ್ನು ಸರಕಾರ ಶೀಘ್ರದಲ್ಲೇ ಹೊರಡಿಸಲಿವೆ.
ಇಂತಹ ನಕಲಿ ನೋಂದಣಿಯನ್ನು ಗುರುತಿಸಿ, ಅದನ್ನು ರದ್ದುಗೊಳಿಸುವ ಅಧಿಕಾರವನ್ನು ಜಿಲ್ಲಾ ಅಧಿಕಾರಿಗಳಿಗೆ ನೀಡಲು ಸರಕಾರ ತೀರ್ಮಾನಿಸಿದ್ದು, ಇಂಥಹ ಪ್ರಕರಣಗಳು ಕಂಡುಬಂದಲ್ಲಿ, ಪರಿಶೀಲನೆ ನಡೆಸಿ, ಆ ನೋಂದಣಿಯನ್ನೇ ರದ್ದುಗೊಳಿಸುವ ಅಧಿಕಾರ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ಬರಲಿದೆ.
ಸರಕಾರದ ಈ ಕರಡು ಅಧಿನಿಯಮ ಮುಂದಿನ ತಿಂಗಳಿಂದಲೇ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ವಿಧಾನಪರಿಷತ್ ಗೆ ತಿಳಿಸಿದ್ದಾರೆ. ನಕಲಿ ದಾಖಲೆ, ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ನೊಂದಣಿ ಮಾಡಿಕೊಂಡಿದ್ದರೆ, ಸಹಜವಾಗಿಯೇ ವಂಚನೆಗೆ ಒಳಗಾದವರು ಕೋರ್ಟ್ ಮೆಟ್ಟೆಲೇರಬೇಕಾಗುತ್ತದೆ. ಆಗ ಅವರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ. ಹೀಗಾಗಿ, ನೋಂದಣಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ತನಿಖೆ ನಡೆಸಿ, ನಕಲಿ ದಾಖಲೆ ಸೃಷ್ಟಿ ಕಂಡುಬಂದಲ್ಲಿ ಅಂತಹ ನೋಂದಣಿ ರದ್ದು ಮಾಡಲಾಗುತ್ತದೆ ಎಂದಿದ್ದಾರೆ.
ರಾಜ್ಯಾದ್ಯಂತ PTCL ಜಮೀನುಗಳು ಸೇರಿದಂತೆ ಅನೇಕ ಆಸ್ತಿಗಳನ್ನು ಹೀಗೆ ನಕಲಿ ದಾಖಲೆ ಸೃಷ್ಡಿಸಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪಗಳಿವೆ. ಅಂತಹ ಸಾವಿರಾರು ಪ್ರಕರಣಗಳು ನ್ಯಾಯಾಲಯದ ಮುಂದೆ ಅನೇಕ ವರ್ಷಗಳಿಂದ ಇರ್ತರ್ಥವಾಗದೆ ಉಳಿದುಕೊಂಡಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಆ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಲು ಹೊರಟಿದೆ.