ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದು ಖ್ಯಾತರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ದಾಸೋಹ ದಿನಾಚರಣೆಯನ್ನು ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ಆಯೋಜನೆ ಮಾಡಲಾಗಿತ್ತು.
ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಮಹಾಲಕ್ಷ್ಮಿ ಲೇಔಟ್ನ ಬಸ್ ನಿಲ್ದಾಣದಲ್ಲಿ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೆ ಅನ್ನಸಂತರ್ಪಣೆ ನಡೆಯಿತು. ಮಹಾಸಭಾದ ರಾಜ್ಯಾಧ್ಯಕ್ಷರಾದ ಬಿ.ಮೋಹನ್ ಕುಮಾರ್ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳು ಕನ್ನಡ ನಾಡಿನ ಮುಖವಾಣಿಯಂತೆ ಬದುಕಿದವರು. ಅವರ ಸಾಧನೆ, ಸಂಯಮ ನಾಡಿಗೆ ಮಾದರಿಯಾಗಿತ್ತು. ಅವರು ತಮ್ಮ ಬದುಕಿನುದ್ದಕ್ಕೂ ಬಡವರ ಸೇವೆಯಲ್ಲಿ ತೊಡಗಿಸಿಕೊಂಡು, ದೇಶಾದ್ಯಂತ ಮನೆಮಾತಾಗಿದ್ದರು ಎಂದರು.
ತ್ರಿವಿಧ ದಾಸೋಹಕ್ಕೆ ಉಪಮೆಯಂತಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರನ್ನು ಸ್ಮರಿಸುವ ಸಲುವಾಗಿ ದಾಸೋಹ ದಿನಾಚರಣೆ ಮಾಡುತ್ತಿರುವ ಮೋಹನ್ ಕುಮಾರ್ ಮತ್ತು ತಂಡದವರಿಗೆ ಅಭಿನಂದನೆಗಳು ಎಂದರು.