ಉಪಯುಕ್ತ ಸುದ್ದಿ

‘ಸಿ’ ದರ್ಜೆಯ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ ಅನುದಾನ: ಮುಜರಾಯಿ ಇಲಾಖೆಯ ಮಹತ್ತರ ಹೆಜ್ಜೆ

Share It


ಬೆಂಗಳೂರು: ನಗರದ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ‘ಸಿʼ ವರ್ಗದ ಅಧಿಸೂಚಿತ  ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ದೇವಾಲಯದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ಮತ್ತು ಮರಣ ಉಪದಾನ ವಿತರಣೆ ಹಾಗೂ ಅರ್ಚಕರಿಗೆ ತಸ್ತೀಕ್ /ವರ್ಷಾಸನ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುವ ಕಾರ್ಯಕ್ರಮಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಸೇರಿದ 33 ವಿದ್ಯಾರ್ಥಿಗಳಿಗೆ ರೂ.4,88,000 ರು.ಗಳ ವಿದ್ಯಾರ್ಥಿ ವೇತನವನ್ನು ಹಾಗೂ ಇಬ್ಬರು ಅರ್ಚಕರ ಕುಟುಂಬದವರಿಗೆ ತಲಾ ರೂ.2 ಲಕ್ಷಗಳಂತೆ  ಒಟ್ಟು ರೂ.4 ಲಕ್ಷ ರೂಗಳ ನೌಕರರ ಮರಣ ಉಪಧನವನ್ನು ಸಚಿವರು ವಿತರಿಸಿದರು.

ಇದಲ್ಲದೆ ರಾಜ್ಯದ ಒಟ್ಟು 7 ಜಿಲ್ಲೆಗಳ 158 ವಿದ್ಯಾರ್ಥಿಗಳಿಗೆ ರೂ.20,09,000 ರು-ಗಳ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ, ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ವಿತರಿಸಲು ಆದೇಶಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಸಿ ವರ್ಗದ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರ ಕ್ಷೇಮಾಭಿವೃದ್ದಿಗಾಗಿ ಇನ್ನು ಹೆಚ್ಚಿನ ಅನುದಾನ ವೆಚ್ಚ ಮಾಡುವ ಉದ್ದೇಶದಿಂದ ಸಾಮಾನ್ಯ ಸಂಗ್ರಹಣಾ ನಿಧಿ ಮೊತ್ತವನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ರಾಜ್ಯಪಾಲರ ಕಛೇರಿ ಕೆಲ ಸ್ಪಷ್ಟೀಕರಣ ಕೇಳಿದ್ದು, ಸವಿವರವಾದ ವಿವರಣೆ ನೀಡಲಾಗಿದ್ದು, ಮಸೂದೆ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದರು ‌

ಈಗಾಗಲೇ ವಿಧಾನಮಂಡಲಗಳಲ್ಲಿ ಸದರಿ ಮಸೂದೆ ಮಂಡಿಸಿ, ಚರ್ಚಿಸಲಾಗಿದ್ದು, ತಿದ್ದುಪಡಿಯೊಂದಿಗೆ ಅಂಗೀಕಾರವಾಗಿದೆ. ರಾಜ್ಯಪಾಲರ ಅನುಮೋದನೆ ದೊರಕಿದ ಕೂಡಲೇ ಹೆಚ್ಚಾಗಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯಲ್ಲಿ ದೇವಸ್ಥಾನಗಳ ಅರ್ಚಕರ/ ನೌಕರರ ಕ್ಷೇಮಾಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆ ರೂಪಿಸಲು ಈಗಾಗಲೇ ರೂಪುರೇಷೆ ತಯಾರು ಮಾಡಲಾಗಿದೆ ಎಂದರು.

1.ಪ್ರತಿ ವರ್ಷ ‘ಸಿ’ ವರ್ಗದ 1500  ದೇವಾಲಯಗಳಿಗೆ ರೂ.5 ಲಕ್ಷ ಅನುದಾನ ಬಿಡುಗಡೆ

2.ಪ್ರತಿ ವರ್ಷ ಅರ್ಚಕರ / ನೌಕರರ ಕನಿಷ್ಠ 3000 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು

3.ಪ್ರತಿ ವರ್ಷ 1000 ಅರ್ಚಕರು/ನೌಕರರಿಗೆ ವಸತಿ ಕಲ್ಪಿಸಲು ಅನುವಾಗುವ ನಿಟ್ಟಿನಲ್ಲಿ  ರೂ.5 ಲಕ್ಷ ಧನ ಸಹಾಯ

4 ಸಮಸ್ತ ಅರ್ಚಕರು/ ನೌಕರರಿಗೆ  ರೂ‌. 5 ಲಕ್ಷ ವಿಮಾ ಯೋಜನೆ ಪ್ರೀಮಿಯಂ ಪಾವತಿಸಲು ಈ ಹಣ ವಿನಿಯೋಗ ಇತರೆ ಪ್ರಮುಖ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ.

ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ. ಎಂ.ವಿ.ವೆಂಕಟೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಡಾ. ಬಿ.ಎಸ್.ಧ್ವಾರಕನಾಥ್, ಕೆ.ಎಂ.ನಾಗರಾಜು, ಮಲ್ಲಿಕಾ ಪ್ರಶಾಂತ ಪಕ್ಕಳ ಹಾಗೂ ವಿನಾಯಕ್‌ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರು ಅರ್ಚಕರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.

ಮಸೂದೆಗೆ ರಾಜ್ಯಪಾಲರ ಅಂಕಿತ ವಿಳಂಬ: ಅರ್ಚಕರ ಸಂಘದ ಅಧ್ಯಕ್ಷರ ಅಸಮಾಧಾನ:
ಅರ್ಚಕರ ಸಂಘದ ಅಧ್ಯಕ್ಷರಾದ ಶ್ರೀವತ್ಸ, ವೆಂಕಟಾಚಲಯ್ಯ ಮತ್ತು ಕೆ.ಎಸ್.‌ ಎನ್‌ ದೀಕ್ಷಿತ್‌ ಮಾತನಾಡಿ, ರಾಜ್ಯದಲ್ಲಿ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಿದ್ದು, ಇದರಲ್ಲಿ 34,166  ಸಿ ವರ್ಗದ ದೇವಾಲಯಗಳಿದ್ದು, ರಾಜ್ಯಪಾಲರು ಸದರಿ ಕಾಯ್ದೆಗೆ ಅನುಮೋದನೆ ನೀಡಿದರೆ, ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರು ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ. ಇಲ್ಲಿಯವರೆಗೆ ನಮ್ಮಗಳ ಬಗ್ಗೆ ಯಾರೂ ಕಾಳಜಿವಹಿಸದೇ ಇದ್ದುದರಿಂದ, ದೇವಸ್ಥಾನಗಳ ಅರ್ಚಕರ /ನೌಕರರ ಶ್ರೇಯೋಭಿವೃದ್ಧಿಯಾಗಿರುವುದಿಲ್ಲ. ಈ ಮಸೂದೆ ನಮಗೆ ಆಶಾಕಿರಣವಾಗಿದೆ ಆದರೆ ಇದುವರೆಗೂ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ದೈವ ಕಾರ್ಯವನ್ನು ನಿರ್ವಹಿಸುವ ಸಹಸ್ರಾರು ಅರ್ಚಕರು/ನೌಕರರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ತಿಳಿಸಿದರು.


Share It

You cannot copy content of this page