ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದ್ದು, ಸರ್ಜರಿ ಮಾಡಿಸಬೇಕಾಗಿದೆ.
ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಬೆನ್ನಿನ ಹಿಂಭಾಗದಲ್ಲಿ ಊತ ಬಂದಿರುವ ಸಾಧ್ಯತೆ ಇದೆ. ಅವರಿಗೆ ಸರ್ಜರಿ ಮಾಡಿಸಲೇಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ಗೆ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ.
ಆದರೆ, ದರ್ಶನ್ ಅವರು ಸ್ಕ್ಯಾನ್ ಮಾಡಿಸುವುದಕ್ಕೆ ಸಿದ್ದರಿಲ್ಲ. ನಾನು ಬೆಂಗಳೂರಿಗೆ ಹೋದ ಬಳಿಕ ಸ್ಕ್ಯಾನ್ ಮಾಡಿಸಿಕೊಳ್ಳುವೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು ಎಂದು ದರ್ಶನ್ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರು ಸಲ್ಲಿಸಿರುವ ಜಾಮೀನು ನಾಳೆ ಅರ್ಜಿ ವಿಚಾರಣೆ ನಡೆದ ನಂತರ ದರ್ಶನ್ ಅವರಿಗೆ ಜಾಮೀನು ಸಿಗಲಿದೆ ಎನ್ನುವ ಭರವಸೆಯಲ್ಲಿದ್ದಾರೆ. ಈ ವಿಚಾರದಲ್ಲಿ ಕೋರ್ಟ್ ಯಾವ ರೀತಿಯ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡಬೇಕಿದೆ.
ಜಾಮೀನು ಅರ್ಜಿ ವಿಚಾರಣೆ ಈಗಾಗಲೇ ಎರಡು ಬಾರಿ ಮುಂದಕ್ಕೆ ಹೋಗಿದೆ. ದರ್ಶನ್ ಪರ ವಕೀಲರು ವಾದ ಮಂಡನೆಗೆ ಹೆಚ್ಚಿನ ಸಮಯ ಕೇಳುತ್ತಿದ್ದಾರೆ. ಈ ಕಾರಣದಿಂದ ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ.