ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ನಮ್ಮ ಬೆಂಗಳೂರನ್ನು ಕೆಂಪೇಗೌಡರು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಬಸವನ ದೇವಸ್ಥಾನವನ್ನು ಕೆಂಪೇಗೌಡರು 1537 ರಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ಪುರಾತನ ದೇವಾಲಯಗಳ ಪೈಕಿ ಒಂದು ಎಂದು ಹೇಳಬಹುದು. ಈ ದೇವಾಲಯದಲ್ಲಿ ಇರುವ ನಂದಿಯು ಏಷ್ಯಾ ಖಂಡದಲ್ಲಿಯೇ ಏಕ ಶಿಲೆಯಲ್ಲಿ ನಿರ್ಮಿತವಾದ ಎತ್ತರದ ನಂದಿ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ.
ನಂದಿಯ ಪೂಜೆಗೆಂದು ನಿತ್ಯ ನೂರಾರು ಮಂದಿ ಜನರು ಬರುತ್ತಾರೆ. ನಂದಿಗೆ ಅಭಿಷೇಕ ಮಾಡಿಸಲು ತುಪ್ಪ ಬೆಣ್ಣೆಯನ್ನು ಕೆಲವರು ತರುತ್ತಾರೆ. ಅಕ್ಕಪಕ್ಕದವರು ಬೆಳಗ್ಗೆ ತಪ್ಪದೇ ನಂದಿಯ ದೇವಾಲಯಕ್ಕೆ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.
ಈ ನಂದಿಯು 4.5 ಮೀಟರ್ ಎತ್ತರ ಮತ್ತು 6.5 ಮೀಟರ್ ಉದ್ದವಿದೆ. ಕೆಂಪೇಗೌಡರು ಇಲ್ಲಿ ಬಸವನ ಗುಡಿಯನ್ನು ಕಟ್ಟಲು ಒಂದು ಕಾರಣವಿದೆ. ಹಿಂದೆ ಇಲ್ಲಿ ಕದಲೇ ಕಾಯಿ ಮತ್ತು ನೆಲಗಡಲೆಯನ್ನು ಬೆಳೆಯುತ್ತಿದ್ದರು. ಗೂಳಿಗಳ ಹಿಂಡು ಬಂದು ಬೆಳೆಯನ್ನೆಲ್ಲ ನಾಶ ಮಾಡುತ್ತಿದ್ದು. ಇಲ್ಲಿ ಒಂದು ದೇವಸ್ಥಾನ ಕಟ್ಟಿದ ಮೇಲೆ ಇವುಗಳ ದಾಳಿಯು ನಿಂತು ಹೋಯಿತು. ಹಾಗಾಗಿ ಈಗಲೂ ಸಹ ಇಲ್ಲಿನ ಜನರು ತಾವು ಬೆಳೆದ ಮೊದಲ ಬೆಳೆಯನ್ನು ನಂದಿಗೆ ಅರ್ಪಿಸುವ ಸಲುವಾಗಿ ಕಡಲೆಕಾಯಿ ಪರಿಷೆ ಯನ್ನು ಮಾಡುತ್ತಾರೆ.
ಇಲ್ಲಿಯ ವಾತಾವರಣ ತುಂಬ ಸೊಗಸಾಗಿದೆ. ದೇವಾಲಯದ ಜೊತೆಗೆ ಮಕ್ಕಳಿಗೆ ಮತ್ತು ದೊಡ್ಡವರಿಗೆ ಪಾರ್ಕ್ ಗಳನ್ನು ನಿರ್ಮಾಣ ಮಾಡಲಾಗಿದೆ. ಯುವಕರು ಮತ್ತು ವೃದ್ಧರು ಎಂಬ ಬೇಧವಿಲ್ಲದೆ ನಿತ್ಯ ನೂರಾರು ಮಂದಿ ಈ ಸ್ಥಳಕ್ಕೆ ಭೇಟಿಯನ್ನು ನೀಡುತ್ತಾರೆ.