ಬೆಳಗಾವಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯದ ಮಹಿಳಾ ಸಿಎಂ ಬಗ್ಗೆ ಕೋಡಿಮಠದ ಶ್ರೀಗಳ ಹೇಳಿಕೆ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದು, ‘ ಅದೆಲ್ಲ ನಗಣ್ಯ, ಮುಡಾ ಹಗರಣ ಬಗ್ಗೆ ಸುಳ್ಳು ದಾಖಲೆ ಕೊಟ್ಟು ಬಿಜೆಪಿಯವರು ಏನೋ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕಿದೆ.
ಇದೆಲ್ಲ ಬಾಲಿಷ ಅನಿಸುತ್ತದೆ. ಈ ವಿಚಾರವಾಗಿ ನಾನು ಏನೂ ಮಾತನಾಡಲು ಬಯಸಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತೀನಿ. ಪಕ್ಷದಲ್ಲಿ ಹೈಕಮಾಂಡ್, ಶಾಸಕಾಂಗ ಎಂದು ಇದೆ. ಆದರೆ, ಇಂತಹ ವಿಚಾರವನ್ನು ಅಲ್ಲಿ, ಇಲ್ಲಿ ಗಲ್ಲಿಯಲ್ಲಿ ಮಾತನಾಡುವ ವಿಚಾರ ಅಲ್ಲ.
ಧೀಮಂತ ನಾಯಕತ್ವ ನಮ್ಮ ಪಕ್ಷಕ್ಕೆ ಇದೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಪಕ್ಷದ ಎಲ್ಲಾ ಶಾಸಕರು, ಸಚಿವರು ಗಟ್ಟಿಯಾಗಿ ಇರುತ್ತಾರೆ. ಸಿದ್ದರಾಮಯ್ಯ ಎಲ್ಲಿಯವರೆಗೆ ಗಟ್ಟಿಯಾಗಿ ಇರ್ತಾರೊ ಅಲ್ಲಿಯವರೆಗೆ ಅವರೇ ಸಿಎಂ.
ಅಲ್ಲಿ ಇಲ್ಲಿ ಗಲ್ಲಿ, ಹಾದಿ ಬೀದಿಯಲ್ಲಿ ಮಾತನಾಡುವ ವಿಷಯ ಅಲ್ಲ. ಸಿದ್ದರಾಮಯ್ಯ ಎಲ್ಲಿಯವರೆಗೆ ಇರ್ತಿನಿ ಅಂತಾರೆ ಅಲ್ಲಿಯವರೆಗೆ ನಮ್ಮ ಬೆಂಬಲ ಅವರಿಗೆ ಇದೆ ಎಂದಿದ್ದಾರೆ.

