ಮಾಗಡಿ : ‘ಮುನಿಶ್ಯಾಮಪ್ಪ ಮತ್ತು ಮಾಗಡಿ ಚಿರತೆ’ ಇದು ಪುರ್ಣಚಂದ್ರ ತೇಜಸ್ವಿ ಅವರ ಒಂದು ಕೃತಿ. ಅದೇ ಮಾದರಿಯಲ್ಲಿ ಮಾಗಡಿ ಪಟ್ಟಣದಲ್ಲೇ ಮೂರು ಚಿರತೆಗಳು ಕಂಡುಬಂದಿವೆ. ಪಟ್ಟಣದಲ್ಲಿ ರಾತ್ರಿ ವೇಳೆ ಮೂರು ಚಿರತೆಗಳು ಸಂಚಾರ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಾಗಡಿ ಪಟ್ಟಣದ 3ನೇ ವಾರ್ಡಿನಲ್ಲಿ ಒಂದೇ ಕಡೆ ಮೂರು ಚಿರತೆಗಳು ಕಂಡುಬಂದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ. ಆಗಸ್ಟ್ 30ರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆಗಳು ಕ್ಯಾಮರಾದಲ್ಲಿ ಕಂಡಬಂದಿವೆ. ಇದರಿಂದ ಪಟ್ಟಣದ ಜನರು ಆತಂಕ ಪಡುವಂತಾಗಿದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕೆಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೋನು ಇಡಲಾಗಿದ್ದು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ. ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರ ಬರದಂತೆ ಈಗಾಗಲೇ ಅರಣ್ಯಾಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಜೊತೆಗೆ ಒಬ್ಬಂಟಿಯಾಗಿ ಮಕ್ಕಳನ್ನ ರಾತ್ರಿ ವೇಳೆ ಮನೆಯಿಂದ ಹೊರ ಕಳಿಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.