ಅಪರಾಧ ಸುದ್ದಿ

ಹನಿಟ್ರ್ಯಾಪ್ ಜಾಲದ ಕರಾಮತ್ತು :40 ಲಕ್ಷ ಕಳೆದುಕೊಂಡ ಉದ್ಯಮಿ

Share It

ಬೆಂಗಳೂರು: ಸಿನಿಮಾ ಮಾಡುವುದಾಗಿ ಲಕ್ಷಾಂತರ ರೂಗಳ ಸಾಲ ಪಡೆದು ವಾಪಾಸು ಕೇಳಲು ಹೋದ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ 40 ಲಕ್ಷ ರೂ. ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಕಾವ್ಯ, ದಿಲೀಪ್‌ ಹಾಗೂ ರವಿಕುಮಾರ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಗಣೇಶ್ ಎಂಜಿ ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ನಡೆಸುತ್ತಿದ್ದು, ಕುಟುಂಬ ಆ್ಯಪ್ ಮುಖಾಂತರ ನಾಲ್ಕು ವರ್ಷದ ಹಿಂದೆ ಕಾವ್ಯ ಪರಿಚಯವಾಗಿದ್ದಳು.

ಕಾಲ‌ ಕ್ರಮೇಣ ಪರಿಚಯವು ಸ್ನೇಹಕ್ಕೆ ತಿರುಗಿತ್ತು. ಈ ಮಧ್ಯೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿ ತನ್ನಿಂದ ನಿರ್ದೇಶಕರೊಬ್ಬರಿಗೆ 4.25 ಲಕ್ಷ ರೂಪಾಯಿ ಹಣ ಕೊಡಿಸಿದ್ದಾಳೆ ಎಂದು ಉದ್ಯಮಿಯ ದೂರಿನಲ್ಲಿ ತಿಳಿಸಿದ್ದಾರೆ.

ಅದಾದ ಕೆಲ ತಿಂಗಳ ಬಳಿಕ ಹಣ ಕೊಡಿಸುವಂತೆ 2023ರಲ್ಲಿ ದೂರುದಾರರು ಒತ್ತಾಯಿಸಿದ್ದಾರೆ. ‌2023 ಸೆಪ್ಟೆಂಬರ್ ನಲ್ಲಿ ಹಣ ನೀಡುವುದಾಗಿ ವಾಟ್ಸ್ ಆ್ಯಪ್ ಕರೆ ಮಾಡಿ, ಆರೋಪಿತ ಮಹಿಳೆಯು ವಾಸವಾಗಿದ್ದ ಗೊಟ್ಟಿಗೆರೆಗೆ ಕರೆಯಿಸಿಕೊಂಡಿದ್ದಳು.

ಬಳಿಕ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿಕೊಂಡು ಅದರ ವಿಡಿಯೋ ಸೆರೆಹಿಡಿದುಕೊಂಡಿದ್ದಳು. ಬಳಿಕ ಸಾಲದ ಹಣ ನೀಡುವುದಿಲ್ಲ.‌ ಒಂದು ವೇಳೆ ಒತ್ತಾಯಿಸಿದರೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ ಎಂದು ದೂರಿನಲ್ಲಿ ಉದ್ಯಮಿ ತಿಳಿಸಿದ್ದಾರೆ.

ವಿಡಿಯೋ ಹರಿಬಿಡುವುದಾಗಿ ಬೆದರಿಸಿ ತನ್ನಿಂದ ಚಿನ್ನದ ಬ್ರಾಸ್ ಲೈಟ್, ಸರ ಪಡೆದುಕೊಂಡಿದ್ದಾಳೆ. ನಂತರ ಸ್ನೇಹಿತರಾದ ದಿಲೀಪ್ ಹಾಗೂ ರವಿಕುಮಾರ್ ಮೂಲಕ ಕಾರು ಕೊಡಿಸುವಂತೆ 40 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ.‌

ಈ ಬಗ್ಗೆ ಪ್ರಶ್ನಿಸಿದ‌ರೆ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿಯೂ ಮಹಿಳೆ ಬ್ಲ್ಯಾಕ್ಮೇಲ್‌ ಮಾಡಿದ್ದಾರೆ ಎಂದು ದೂರಿನಲ್ಲಿ ಉದ್ಯಮಿ ತಿಳಿಸಿದ್ದಾರೆ.


Share It

You cannot copy content of this page