ನವದೆಹಲಿ: ಬಾ ನಲ್ಲೆ ಮಧುಚಂದ್ರಿಕೆ ಸಿನಿಮಾ ಸ್ಟೋರಿಯಂತಹದ್ದೇ ಘಟನೆ ಮೇಘಾಲಯದ ಕಣಿವೆ ಪ್ರದೇಶದಲ್ಲಿ ನಡೆದಿದೆ. ಆದರೆ, ಕತೆಯಲ್ಲೊಂದು ಟ್ವಿಸ್ಟ್ ಏನಂದ್ರೆ, ಇಲ್ಲಿ ಕೊಲೆಯಾಗಿದ್ದು, ನಲ್ಲೆಯಲ್ಲ !
ಮಧ್ಯಪ್ರದೇಶದ ಇಂದೋರ್ನ ದಂಪತಿ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ನಾಪತ್ತೆಯಾಗಿದ್ದರು.
ಕೆಲ ದಿನಗಳ ಬಳಿಕ ಅವರಿಬ್ಬರೂ ಫೋನ್ಗೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಅವರ ಪತ್ತೆಗೆ ಪೊಲೀಸರು ಪ್ರಯತ್ನಿಸಿದ್ದರು. ಎಷ್ಟು ಪ್ರಯತ್ನಪಟ್ಟರೂ ಅವರಿಬ್ಬರ ಮಾಹಿತಿ ಸಿಗದಿದ್ದಾಗ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆ ವೇಳೆ ಅವರು ತಿರುಗಾಡಲು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿದ್ದು, ತೀವ್ರ ಹುಡುಕಾಟದ ಬಳಿಕ, ಪತಿ ರಾಜಾ ಅಘುವಂಶಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಮ್ಳನ್ನು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿ, ಹಬಿಮೂನ್ ಗೆ ತೆರಳುವ ನವದಂಪತಿಗಳ ಧೈರ್ಯ ಕೆಡಿಸಿತ್ತು. ಆದರೆ, ತಬಿಖೆಯ ವೇಳೆ ಪೊಲೀಸರಿಗೆ ಈ ಕತೆ ಥೇಟ್ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದ ಫೀಮೇಲ್ ವರ್ಷನ್ ಎಂದು ಗೊತ್ತಾಗಿದೆ. ಪೊಲೀಸರು ತೀವ್ರ ತನಿಖೆ ನಡೆಸಿದಾಗ ಪತಿಯ ಕೊಲೆಗೆ ನವವಧು ಸುಪಾರಿ ಹಂತಕರನ್ನು ಕರೆದುಕೊಂಡೇ ಹನಿಮೂನ್ ಗೆ ಹೋಗಿದ್ದಳು ಎನ್ನಲಾಗಿದೆ.
ಇದೀಗ ತಲೆಮರಸಿಕೊಂಡಿದ್ದ ಸೋನಮ್ ರಘುವಂಶಿಯನ್ನು ಬಂಧಿಸಲಾಗಿದೆ. ಅವಳ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಆಕೆಯ ಬಾಯ್ಫ್ರೆಂಡ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಸಿನಿಮೀಯ ರೀತಿಯಲ್ಲಿ ಹನಿಮೂನ್ ಪ್ಲ್ಯಾನ್ ಅನ್ನು ಸಂಪೂರ್ಣವಾಗಿ ಸೋನಮ್ ರೂಪಿಸಿದ್ದಳು. ಹೆಂಡತಿಯ ಹನಿಮೂನ್ ಆಸಕ್ತಿಗೆ ಮಾರುಹೋಗಿದ್ದ ಗಂಡ, ಆಕೆ ಹೇಳಿದ್ದಕ್ಕೆಲ್ಲ ತಲೆಯಾಡಿಸಿದ್ದ. ಖುಷಿಯಿಂದ ಮಧುಚಂದ್ರ ಸವಿಯಲು ಹೊರಟಿದ್ದ.
ಹನಿಮೂನ್ ನ ಎಲ್ಲಾ ಕಡೆ ಅವಳೇ ಬುಕಿಂಗ್ ಮಾಡಿದ್ದಳು. ಎಲ್ಲೆಲ್ಲಿ ಹೋಗಬೇಕು ಎನ್ನುವ ನಕ್ಷೆಯನ್ನೂ ಸೋನಂ ಸಿದ್ಧಪಡಿಸಿದ್ದಳು. ಆದರೆ ಕುತೂಹಲದ ವಿಷಯ ಏನೆಂದರೆ, ಹೋಗುವಾಗ ವಿಮಾನದ ಟಿಕೆಟ್ ಬುಕ್ ಮಾಡಿದ್ದ ಅವಳು, ಬರುವಾಗಿನ ಟಿಕೆಟ್ ಬುಕ್ ಮಾಡಿಸಿಯೇ ಇರಲಿಲ್ಲ!
ಇದು ಕೂಡ ಅವಳೇ ಕೊಲೆ ಮಾಡಿಸಿದ್ದಾಳೆ ಎನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಸೋನಂ ಒಂದೇ ಒಂದು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿರಲಿಲ್ಲ.