ಕಲಬುರಗಿ:ಕಾರಿನಲ್ಲಿ ಮಹಿಳೆಯನ್ನು ಕೊಂದು ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಸಮೀಪದಲ್ಲಿ ಆಕೆಯ ಶವವನ್ನು ಸುಟ್ಟು ಹಾಕಿದ ಆರೋಪದಡಿ ವಿಜಯಪುರ ಮೂಲದ ಇಬ್ಬರನ್ನು ವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಯಾರ ತಾಂಡಾದ ದೇವಿಬಾಯಿ ಲಾಲ್ಸಿಂಗ್ ಜಾಧವ (42) ಕೊಲೆಯಾದ ಮಹಿಳೆ.
ದೇವಿಬಾಯಿ ಜತೆಗೆ ಸಹ ಜೀವನ ನಡೆಸುತ್ತಿದ್ದ ಅದೇ ತಾಂಡಾದ ಸೋಮಲು ಪವಾರ್ (53) ಹಾಗೂ ಹಾಮು ಪಪ್ಪು ಕೊಲೆ ಮಾಡಿದ ಆರೋಪಿಗಳು. ಲಾಡ್ಲಾಪುರ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದ ತಗ್ಗಿನಲ್ಲಿ ಅಪರಿಚಿತ ಮಹಿಳೆಯನ್ನು ಸುಟ್ಟು ಹಾಕಿದ್ದ ಪ್ರಕರಣವನ್ನು ವಾಡಿ ಠಾಣೆಯ ಪೊಲೀಸರು ಭೇದಿಸಿದ್ದಾರೆ.
‘ಪತಿ ಮೃತಪಟ್ಟಿದ್ದರಿಂದ ಕಳೆದ 10 ವರ್ಷಗಳಿಂದ ಸೋಮಲು ಜತೆಯಲ್ಲಿ ದೇವಿಬಾಯಿ ಅವರು ಸಹ ಜೀವನ ನಡೆಸುತ್ತಿದ್ದರು. ಈ ಇಬ್ಬರೂ ಕಳೆದ ಎಂಟು ತಿಂಗಳಿಂದ ಆಳಂದ ತಾಲ್ಲೂಕಿನ ಸಂಗೋಳಗಿಯಲ್ಲಿ ಕೆಲಸಕ್ಕಾಗಿ ಬಂದಿದ್ದರು. ದೇವಿಬಾಯಿ ಅವರ ಮೊದಲ ಪತಿಯ ಎರಡನೇ ಪುತ್ರಿಯ ಮದುವೆ ಸಂಬಂಧ ಸೋಮಲು ಮತ್ತು ದೇವಿಬಾಯಿ ನಡುವೆ ಆಗಾಗ ಜಗಳವಾಗುತ್ತಿತ್ತು. ಸಂಬಂಧಿಕರಲ್ಲಿ ಮದುವೆ ಮಾಡಿಕೊಡುವ ದೇವಿಬಾಯಿ ಇಚ್ಛೆಗೆ ಸೋಮಲು ವಿರೋಧಿಸಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಗೋಳಗಿಯಲ್ಲಿದ್ದ ಸೋಮಲು ಬಳಿಗೆ ವಿಜಯಪುರದಿಂದ ದೇವಿಬಾಯಿ ಮತ್ತು ಆಕೆಯ ಮಗಳು ಬಂದಾಗ ಮತ್ತೆ ಜಗಳವಾಗಿತ್ತು. ಇದರಿಂದ ಬೇಸತ್ತು ಮಗಳು ವಾಪಸ್ ವಿಜಯಪುರಕ್ಕೆ ಹೋದಳು. ದೇವಿಬಾಯಿ ಅಲ್ಲಿಯೇ ಉಳಿದುಕೊಂಡರು. ಜಗಳವೆಲ್ಲ ಮುಗಿದ ಬಳಿಕ ವಿಜಯಪುರ ಬಸ್ ಹತ್ತಿಸುವುದಾಗಿ ದೇವಿಬಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡದ್ದ. ಕಾರಿನಲ್ಲಿ ಸೋಮಲು ಜತೆಗೆ ಹಾಮು ಸಹ ಇದ್ದ. ಆಳಂದ ಚೆಕ್ಪೋಸ್ಟ್ ಬಳಿಯೇ ವಿಜಯಪುರ ಬಸ್ ಹತ್ತಿಸಬೇಕಿತ್ತು. ಕಲಬುರಗಿ ನಗರ ದಾಟಿ ಮುಂದೆ ಹೋಗುತ್ತಿದ್ದಾಗ ದೇವಿಬಾಯಿಗೆ ಅನುಮಾನ ಬಂದು ಪ್ರಶ್ನಿಸಿದ್ದರು. ಕೊಲೆಗೆ ತಯಾರಿ ಮಾಡಿಕೊಂಡಿದ್ದ ಸೋಮಲು, ಸಣ್ಣೂರ್ ಕ್ರಾಸ್ ಸಮೀಪ ಕಾರಿನಲ್ಲಿಯೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ’ ಎಂದರು.
ಕಾರಿನಲ್ಲಿ ಶವ ಇರಿಸಿಕೊಂಡು ಸೇಡಂನತ್ತ ತೆರಳುತ್ತಿದ್ದಾಗ ಟೋಲ್ ಗೇಟ್ ನೋಡಿ ವಾಪಸಾದರು. ಶಹಾಬಾದ್, ರಾವೂರು ಮಾರ್ಗವಾಗಿ ಚಿತ್ತಾಪುರಕ್ಕೆ ಹೋಗಿ ಒಂದು ಕ್ಯಾನ್ ಖರೀದಿಸಿ ಪೆಟ್ರೋಲ್ ತುಂಬಿಸಿಕೊಂಡರು. ಯಾದಗಿರಿ-ತೆಲಂಗಾಣ ಗಡಿಯಲ್ಲಿ ಶವ ಬಿಸಾಡಲು ಯತ್ನಿಸಿ ವಿಫಲವಾದರು. ಯಾದಗಿರಿಯಲ್ಲಿ ಸಲಿಕೆ ಖರೀದಿಸಿ ವಾಡಿ ಕಡೆ ಬರುವಾಗ ಲಾಡ್ಲಾಪುರ ಸಮೀಪ ಶವವನ್ನು ಹೂಳಿಡಲು ಮುಂದಾದರು. ನೆಲ ಗಟ್ಟಿಯಾಗಿದ್ದರಿಂದ ಹೂಳಲು ಆಗದೆ, ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಪರಾರಿಯಾದರು’ ಎಂದು ಮಾಹಿತಿ ನೀಡಿದರು.
‘ಶವ ಸುಟ್ಟ ಸ್ಥಳದಲ್ಲಿ ಸಿಕ್ಕ ಸಲಿಕೆ ಮತ್ತು ಕ್ಯಾನ್ ಆರೋಪಿಗಳ ಪತ್ತೆಗೆ ನೆರವಾದವು. ಇವೆರಡು ಎಲ್ಲಿ ಖರೀದಿಯಾದವು ಎಂಬುದನ್ನು ಹುಡಿಕೊಂಡು ಹೋದಾಗ ಗಣಿಯಾರ ತಾಂಡಾದ ಮಹಿಳೆಯೊಬ್ಬರು ಕಾಣಿಯಾಗಿದ್ದು ಗೊತ್ತಾಯಿತು. ಎರಡೂ ಪ್ರಕರಣಗಳನ್ನು ಹೋಲಿಕೆ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಸಣ್ಣೂರ್ ಕ್ರಾಸ್ ಸಮೀಪ ಮಹಿಳೆಯನ್ನು ಕೊಲೆ ಮಾಡಿ, ಲಾಡ್ಲಾಪುರ ಬಳಿ ಆಕೆಯ ಶವ ಸುಟ್ಟಿದ್ದಾಗಿ ಆರೋಪಿಗಳು ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.
ಕೊಲೆಗೈದು ಹುಡುಕಾಟ ನಡೆಸಿದ ಆರೋಪಿ’
‘ಮಹಿಳೆಯನ್ನು ಕೊಂದು ಶವವನ್ನು ಸುಟ್ಟ ಆರೋಪಿಯು ತನ್ನ ಮೇಲೆ ಸಂಶಯ ಬಾರದೆ ಇರಲಿ ಎಂದು ಗಣಿಯಾರ ತಾಂಡಾಗೆ ತೆರಳಿದ. ದೇವಿಬಾವಿಯನ್ನು ವಿಜಯಪುರ ಬಸ್ ಹತ್ತಿಸಿ ಕಳುಹಿಸಿದ್ದೇನೆ ಎಲ್ಲಿಗೆ ಹೋಗಿದ್ದಾಳೆ ಗೊತ್ತಿಲ್ಲ ಎಂದು ಹೇಳಿದ್ದ’ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ‘ಆಕೆಯ ಕುಟುಂಬಸ್ಥರ ಜತೆಗೆ ಸೇರಿಕೊಂಡು ಹುಬ್ಬಳ್ಳಿ ನಿಪ್ಪಾಣಿ ಸೇರಿ ವಿವಿಧೆಡೆ ಹುಡುಕಾಡಿ ಬಂದಿದ್ದಾನೆ. ಆತನ ವರ್ತನೆಯ ಬಗ್ಗೆ ಮೃತರ ಪುತ್ರಿ ಅನುಮಾನ ವ್ಯಕ್ತಪಡಿಸಿದ್ದಳು’ ಎಂದರು.