ಬೆಂಗಳೂರು: ನಗರ ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಶಾಂತಿನಗರದ ಜೋಡಿ ರಸ್ತೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ.
ಎದೆ ನೋವಿನಿಂದ ಬಳಲುತ್ತಿದ್ದ ಚಾಲಕ ವೀರೇಶ್ ಕೂತ ಜಾಗದಲ್ಲೇ ಒಂದು ಕಡೆ ವಾಲಿದ್ದಾರೆ.
ಹೀಗಾಗಿ ಬಸ್ ನಿಧಾನವಾಗಿ ಚಲಿಸುತ್ತಿತ್ತು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಹಲಸೂರು ಸಂಚಾರ ಠಾಣೆ ಎಎಸ್ಐ ಆರ್.ರಘುಕುಮಾರ್ ಅನುಮಾನಗೊಂಡು ಬಸ್ ಬಳಿ ಬಂದು ನೋಡಿದಾಗ, ಚಾಲಕ ವಿರೇಶ್ ಒಂದು ಕಡೆ ವಾಲಿದ್ದನ್ನು ಕಂಡಿದ್ದಾರೆ. ತಕ್ಷಣ ಚಲಿಸುತ್ತಿದ್ದ ಬಸ್ ಹತ್ತಿದ್ದಾರೆ. ನಂತರ ಹ್ಯಾಂಡ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ.
ಬಳಿಕ, ಆ್ಯಂಬುಲೆನ್ಸ್ ಗೆ ಕಾಯದೆ ಅಶೋಕ ನಗರ ಟ್ರಾಫಿಕ್ ಪೊಲೀಸ್ ಪ್ರಸನ್ನ ಕುಮಾರ್ ಅವರ ಸಹಾಯದಿಂದ ಚಾಲಕ ವೀರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಸುಮಾರು 45 ಮಂದಿ ಪ್ರಯಾಣಿಕರ ಮತ್ತು ಚಾಲಕ ವಿರೇಶ್ ಅವರ ಪ್ರಾಣ ಉಳಿದಿದೆ.

