ಬೆಂಗಳೂರು: ಕುಡಿದು ಬಂದು ಜಗಳ ಮಾಡಿದಾತನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನರ ನಗರದ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರಿ ಮೂಲದ ಸುಜಿತ್ (22) ಹತ್ಯೆಯಾದ ಯುವಕ. ಈ ಹಿಂದೆ ಬಿಳೇಕಲ್ಲಹಳ್ಳಿಯಲ್ಲಿರುವ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಕೆಲಸದ ವೇಳೆ ಮದ್ಯಪಾನ ಮಾಡಿ ಬರುತ್ತಿದ್ದರಿಂದ ಮಾಲೀಕರು ಆತನನ್ನು ಕೆಲಸದಿಂದ ತೆಗೆದಿದ್ದರು.
ಹಾಗಾಗಿ ಸುಜಿತ್ ಬೇರೆ ಕಡೆ ಕೆಲಸಮಾಡುತ್ತಿದ್ದ.
ಹತ್ಯೆಯಾದ ದಿನ ಈ ಪ್ಲೈವುಡ್ ಅಂಗಡಿಯಲ್ಲಿ ನಾಲ್ವರು ಕೆಲಸಗಾರರು ಮರಗೆಲಸ ಮಾಡುತ್ತಿದ್ದರು ರಾತ್ರಿ 8 ಗಂಟೆ ಸುಮಾರಿನಲ್ಲಿ ಇಬ್ಬರು ಕೆಲಸಗಾರರು ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ಸುಜಿತ್ ಪ್ಲೈವುಡ್ ಅಂಗಡಿ ಬಳಿ ಕುಡಿದು ಬಂದು ಇಬ್ಬರು ಕೆಲಸಗಾರರ ಜೊತೆ ಜಗಳವಾಡಿದ್ದಾನೆ.
ಮಾತಿಗೆಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ರಿಪೀಸ್ ಪಟ್ಟಿಯಿಂದ ಕೆಲಸಗಾರರು ಸುಜಿತ್ ತಲೆಗೆ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಇದರಿಂದ ಗಾಬರಿಯಾದ ಇಬ್ಬರೂ ಕೆಲಸಗಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೆಲ ಸಮಯದ ಬಳಿಕ ಹೊರಗೆ ಹೋಗಿದ್ದ ಇನ್ನಿಬ್ಬರು ಕೆಲಸಗಾರರು ಅಂಗಡಿಗೆ ಬಂದಾಗ ಸುಜಿತ್ ಕೊಲೆಯಾಗಿರುವುದು ಗಮನಿಸಿ, ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು. ಆರೋಪಿಗಳನ್ನು ಬಂಧಿಸಿದ್ದಾರೆ.