ಹುಬ್ಬಳ್ಳಿ : ದೇವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಅಪರ್ಣಾ ಅಪಾರ್ಟ್ಮೆಂಟ್ನಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿದೆ.
15 ವರ್ಷಗಳ ಹಿಂದೆ ಅಪರ್ಣಾ ಅಪಾರ್ಟ್ಮೆಂಟ್ನಲ್ಲಿನ ಎಲ್ಲರೂ ಸೇರಿ ದತ್ತಾತ್ರೇಯ ದೇವಸ್ಥಾನವನ್ನು ನಿರ್ಮಾಣ ಮಾಡಿ ದತ್ತಾತ್ರೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿದಿನವೂ ಕೂಡ ಪೂಜೆ ಮಾಡಲಾಗುತ್ತಿತ್ತು.
ಹಬ್ಬದ ದಿನವೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಬೇಸರವನ್ನು ಮೂಡಿಸಿದೆ. ಏರಿಯಾದಲ್ಲಿ ನಡೆದ ಈ ಘಟನೆಯಿಂದ ಆತಂಕ ನಿರ್ಮಾಣವಾಗಿದೆ.
ಭಾನುವಾರ ರಾತ್ರಿ 2 ಗಂಟೆಯವರೆಗೂ ಇಲ್ಲಿ ಎಲ್ಲರೂ ಸೇರಿ ನವರಾತ್ರಿ ಹಬ್ಬವನ್ನು ಆಚರಣೆ ಮಾಡಿ ಹೋಗಿದ್ದಾರೆ. ಸೋಮವಾರ ಬೆಳ್ಳಿಗ್ಗೆ ದೇವಸ್ಥಾನದ ಪೂಜಾರಿ ಬಂದಾಗ ದುಷ್ಕ್ರತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದ ಪೂಜಾರಿ ಈ ಕುರಿತು ಮಾತನಾಡಿ, ರಾತ್ರಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ ಹೋಗಲಾಗಿತ್ತು. ಆದರೆ ಕಿಡಿಗೇಡಿಗಳು ಬೀಗವನ್ನು ಮುರಿಯದೆ ಕಬ್ಬಿಣದ ರಾಡ್ ತಗೊಂಡು ಮೂರ್ತಿಯ ಕೈಗೆ ಹೊಡೆದು ನಾಲ್ಕು ಕೈ ಮೂರಿದಿರುವ ಅನುಮಾನ ಎದ್ದು ಕಾಣುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಕಬ್ಬಿಣದ ರಾಡ್ ಕೂಡ ಅಲ್ಲೇ ಬಿದ್ದಿದೆ ಎಂದರು. ಸ್ಥಳಕ್ಕೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿ 24 ಗಂಟೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಹೇಳಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಉಪನಗರ ಪೊಲೀಸರು ಭೇಟಿ ನೀಡಿ, ಅಪಾರ್ಟ್ಮೆಂಟ್ನಲ್ಲಿನ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.