ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನು ಎಲ್ಲಾ ಉದ್ದಿಮೆ, ಕಂಪನಿಗಳಲ್ಲಿ ಮಾಡಬೇಕೆಂದು ಮನವಿ ಮಾಡಲಾಗಿದ್ದು, ಕನ್ನಡ ಸಂಘಟನೆಗಳು ಯಾವುದೇ ಸಂಸ್ಥೆಗಳ ಮೇಲೆ ದಾಳಿ ಮಾಡಿ ಒತ್ತಾಯ ಮಾಡಬಾರದು. ಈ ವಿಚಾರವನ್ನು ಸರ್ಕಾರ ನಿಭಾಯಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಎಲ್ಲಾ ವಾಣಿಜ್ಯ ಉದ್ದಿಮೆಗಳು ಕನ್ನಡ ಬಾವುಟ ಪ್ರದರ್ಶನ ಮಾಡಿ ರಾಷ್ಟ್ರ ಧ್ವಜಕ್ಕೆ ನೀಡುವ ಗೌರವವನ್ನು ಕನ್ನಡ ಧ್ವಜಕ್ಕೂ ನೀಡಬೇಕೆಂದು ಮನವಿ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಜತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಬೆಂಗಳೂರಿನಲ್ಲಿರುವ ಜನರು ಹಾಗೂ ಮುಂದಿನ ಪೀಳಿಗೆ ಮಕ್ಕಳಿಗೆ ಕನ್ನಡದ ಮಹತ್ವ ತಿಳಿಸುವಂತೆ ಮಾಡಬೇಕು.
ಕನ್ನಡದ ಸ್ವಾಭಿಮಾನಕ್ಕೆ ಗೌರವ ನೀಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಹೊರಗಿನಿಂದ ಬಂದವರು ಕನ್ನಡವನ್ನು ಕಲಿಯುವ ಆಸಕ್ತಿ ತೋರಿ, ಈ ಭಾಷೆಗೆ ಗೌರವ ನೀಡುವ ಕೆಲಸ ಮಾಡಬೇಕೆಂದು ಹೇಳಿದರು.
ಕನ್ನಡ ಸಂಘಟನೆಗಳು ಯಾವುದೇ ಸಂಸ್ಥೆಗಳ ಮೇಲೆ ದಾಳಿ ಮಾಡಿ ಒತ್ತಾಯ ಮಾಡಬಾರದು. ಈ ವಿಚಾರವನ್ನು ಸರ್ಕಾರ ನಿಭಾಯಿಸಲಿದೆ. ಇದರಲ್ಲಿ ಯಾರೂ – ಹಸ್ತಕ್ಷೇಪ ಮಾಡುವಂತಿಲ್ಲ. ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.