ಬೆಂಗಳೂರು: ರಾಜ್ಯದಲ್ಲಿBPL ಕಾರ್ಡ್ ರದ್ದು ಮಾಡಲಾಗಿದೆ ಎಂದು ರಂಪಾಟ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ ಅರ್ಹರಾದವರಿಗೆ ಯಾವುದೇ ರೀತಿಯಿಂದಲೂ ಪಡಿತರ ಕಾರ್ಡ್ ರದ್ದಾಗುವುದಿಲ್ಲ ಎಂದು ಹೇಳಿದ್ದಾರೆ. ಅನರ್ಹರು ಬಡವರ ಹೆಸರಿನಲ್ಲಿ ಕಾರ್ಡ್ ಹೊಂದಿದ್ದರೆ ಅವರ ಕಾರ್ಡ್ ಅನ್ನು ಮಾತ್ರ ರದ್ದು ಮಾಡಲಾಗುತ್ತದೆ ಎಂದರು.
ಇಷ್ಟು ಸ್ಪಷ್ಟವಾಗಿ ಹೇಳಿದ್ದಾಗ್ಯೂ ಸಹ ಬಿಜರಪಿ ನಾಯಕರು ವಿಷಯಾಂತರ ಮಾಡಿ ಜನರನ್ನು ದಾರಿತಪ್ಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚಾಳಿ ಕರಗತವಾಗಿದೆ. ಸರ್ಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಪಡೆಯುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ 2003 ರಲ್ಲಿ ನಾನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವನಾಗಿದ್ದಾಗ ನಗರ ಪ್ರದೇಶದ ಬಡವರಿಗೆ ( Urban Poor)ಮೊದಲ ಬಾರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಅತೀ ಹೆಚ್ಚು ದಾಖಲೆ ಮಟ್ಟದ ರೇಷನ್ ಕಾರ್ಡ್ ಗಳನ್ನು ವಿತರಿಸಿದ್ದು ನನ್ನ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂಬುದನ್ನು ಸ್ಮರಿಸಿದ್ದಾರೆ.
ನಮ್ಮದು ಬಡವರ ಪರ ಇರುವ ಸರ್ಕಾರ ಕಾರ್ಪೊರೇಟ್ ಪರ ಸರಕಾರವಲ್ಲ: 5.8 ಕೋಟಿ ಕಾರ್ಡ್ ಗಳನ್ನು ರದ್ದು ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಬಗ್ಗೆ ಚಕಾರವೆತ್ತುವ ಎದೆಗಾರಿಕೆ ಅವರಲ್ಲಿದೆಯೇ? ಬಿಪಿಎಲ್ ಕಾರ್ಡ್ ರದ್ದು ಕುರಿತಂತೆ ನಮ್ಮ ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಾಜ್ಯ ಬಿಜೆಪಿಯ ಮಹಾನ್ ಹೋರಾಟಗಾರರೆಲ್ಲರೂ ಈಗ ಗಪ್-ಚುಪ್ ಎಂದಿದ್ದಾರೆ..
ಪ್ರಹ್ಲಾದ್ ಜೋಷಿ, ವಿಜಯೇಂದ್ರ, ಅಶೋಕ್ , ಶೋಭಾ ಕರಂದ್ಲಾಜೆ ಇವರೆಲ್ಲಾ ಕೇಂದ್ರದ ವಿರುದ್ಧ ಹೋರಾಟ ಮಾಡುವಿರಾ? ರಾಜ್ಯ ಬಿಜೆಪಿ ಅಧಿಕೃತ ಅಧ್ಯಕ್ಷ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಆತುರದಲ್ಲಿರುವ ಬಿಜೆಪಿ ಬಂಡಾಯ ಗುಂಪಿನ ಅಧ್ಯಕ್ಷ ಬಸನಗೌಡ ಯತ್ನಾಳ್ ಅವರೇ ಇದಕ್ಕೆ ಏನಂತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ನಿಮ್ಮಲ್ಲೇ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ ನಾಯಕರೇ ಪ್ರಧಾನಿ ಮನೆ ಮುಂದೆ ಧರಣಿ ಮಾಡಿ, ಬಿಪಿಎಲ್ ರದ್ದಾದ ಅರ್ಹರಿಗೆ ನ್ಯಾಯ ಕೊಡಿಸಿ ಎಂದು ಸಲಹೆ ನೀಡಿದ್ದಾರೆ

