ರಾಜಕೀಯ ಸುದ್ದಿ

ಬಿಬಿಎಂಪಿ ಪೌರಕಾರ್ಮಿಕರು ಖಾಯಂ, ಮುಂದಿನ ಸರದಿ ಡ್ರೈವರ್ಸ್, ಹೆಲ್ಪರ್ಸ್, ಆಪರೇಟರ್ಸ್: ಸಿಎಂ ಘೋಷಣೆ

Share It

ಬೆಂಗಳೂರು: ಬಿಬಿಎಂಪಿಯ ನೇರ ವೇತನದಡಿಯಲ್ಲಿ ಕೆಲಸ ಮಾಡುತ್ತಿರುವ 12,692 ಪೌರಕಾರ್ಮಿಕರನ್ನು ಕಾಯಂಗೊಳಿಸಿ, ನೇಮಕ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದರು.

ಜತೆಗೆ ಬಿಬಿಎಂಪಿ ವಾಹನ ಚಾಲಕರು, ಪೌರಕಾರ್ಮಿಕರ ಸಹಾಯಕರು ಮತ್ತು ಆಪರೇಟರ್​ಗಳನ್ನು ಕೂಡ ಮುಂದಿನ ದಿನಗಳಲ್ಲಿ ಕಾಯಂ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಪೌರ-ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ 12,692 ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ವಿತರಣೆ ಮಾಡಿದರು. ಬಳಿಕ, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅವರು, ರಾಜ್ಯದಲ್ಲಿ 38 ಸಾವಿರ ಪೌರಕಾರ್ಮಿಕರಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಅಂತ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪೌರಕಾರ್ಮಿಕರು ದೂರು ನೀಡಿದ್ದರು. ಮಿನಿಮಮ್ ವೇಜಸ್ ಆ್ಯಕ್ಟ್ ಅಡಿ ಕನಿಷ್ಠ ವೇತನ ಕೊಡಿಸುವ ಕೆಲಸ ಮಾಡಿದೆ. ಮಧ್ಯವರ್ತಿಗಳ ಹಾವಳಿಯಿಂದ ನೀವು ಇವತ್ತು ಮುಕ್ತರಾಗಿದ್ದೀರಿ ಎಂದರು.

ನೀವೆಲ್ಲಾ ಶುಚಿತ್ವ ಕಾಪಾಡುವರು. ಶುಚಿತ್ವದಲ್ಲೇ ದೈವತ್ವ ಕಾಣುತ್ತೇವೆ. ಅಂತಾ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಶುಚಿತ್ವ ಮಾಡುವ ಕೆಲಸ ಬಹಳ ಶ್ರೇಷ್ಠವಾದದ್ದು. ಬಸವಣ್ಣ ಅವರು ಕಾಯಕವೇ ಕೈಲಾಸ ಅಂದಿದ್ದರು. ಯಾವ ಕೆಲಸವೂ ಕೀಳಲ್ಲ, ಯಾವ ಕೆಲಸವೂ ಮೇಲಲ್ಲ ಎಂದರು.

ನಿಮ್ಮನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶವಾಗಿದೆ. ಪೌರಕಾರ್ಮಿಕರನ್ನು ಮುಖ್ಯವಾಹಿನಿಗೆ ತರಬೇಕು. ನಮ್ಮ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದು. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಶಕ್ತಿ ಕೊಡಬೇಕು. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.

ನೀವೆಲ್ಲ ನಿಮಗೆ ಸಹಾಯ ಮಾಡುವ ಪಕ್ಷ, ಸರ್ಕಾರದ ಪರ ನಿಲ್ಲಬೇಕು. ನಾವು ಅನೇಕ ಜನಪರ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುತ್ತಿದ್ದೇವೆ. ನೂರಕ್ಕೆ ನೂರರಷ್ಟು ಮಕ್ಕಳು ವಿದ್ಯಾವಂತರಾಗಬೇಕು. ನೀವೆಲ್ಲ ವಿದ್ಯಾವಂತರಾದರೆ ಬಿಆರ್​ ಅಂಬೇಡ್ಕರ್, ಬುದ್ಧ, ಬಸವಣ್ಣ ಹೇಳಿದಂತೆ ಸಮಾಜ ನಿರ್ಮಾಣವಾಗುತ್ತದೆ. ಸಂವಿಧಾನದ ಆಶಯ ಈಡೇರಿಕೆಗೆ ನೀವೆಲ್ಲ ವಿದ್ಯಾವಂತರಾಗಬೇಕು ಎಂದು ಸಿಎಂ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ಭೈರತಿ ಸುರೇಶ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗಿಯಾಗಿದ್ದರು.


Share It

You cannot copy content of this page