ಬೆಂಗಳೂರು: ಆಡಳಿತದಲ್ಲಿ ಕನ್ನಡವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರಕಾರ ತೀರ್ಮಾನಿಸಿದ್ದು, ಈ ಕುರಿತು ಮುಖ್ಯ ಕಾರ್ಯದರ್ಶಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಎಲ್ಲ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವಂತೆ ತಾಕೀತು ಮಾಡಲಾಗಿದೆ. ಜತೆಗೆ ಅರ್ಜಿ ಮತ್ತು ಯಾವುದೆ ಪತ್ರಗಳಿಗೆ ಉತ್ತರ ನೀಡುವಾಗ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಸೂಚಿಸಲಾಗಿದೆ. ವಿಧಾನಮಂಡಲದ ಕಾರ್ಯಕಲಾಪ, ಪತ್ರವ್ಯವಹಾರ, ಗಮನ ಸೆಳೆಯುವ ಸೂಚನೆ ಕನ್ನಡದಲ್ಲಿಯೇ ಇರುವಂತೆ ತಿಳಿಸಲಾಗಿದೆ.
ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಸೇರಿದಂತೆ ಪ್ರಮುಖ ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಲು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆಂಗ್ಲ ಭಾಷೆಯ ನಮೂನೆ, ದಾಖಲೆಗಳನ್ನು ಕನ್ನಡದಲ್ಲಿಯೇ ಭರ್ತಿ ಮಾಡುವಂತೆ ಆದೇಶಿಸಲಾಗಿದೆ. ಕೇಂದ್ರ ಸರಕಾರ, ಹೊರರಾಜ್ಯಗಳು ಮತ್ತು ನ್ಯಾಯಾಲಯದ ಪತ್ರ ವ್ಯವಹಾರ ಹೊರತುಪಡಿಸಿ ಉಳಿದೆಲ್ಲವೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಲು ಆದೇಶಿಸಲಾಗಿದೆ.
ಕನ್ನಡ ಬಳಕೆಗೆ ಸಂಬಂಧಿಸಿ ಕನ್ನಡ ಪ್ರಾಧಿಕಾರ ವಿವಿಧ ಇಲಾಖೆಗಳಿಗೆ ನೊಟೀಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ. ಆ ಮೂಲಕ ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಆದೇಶ ಉಲ್ಲಂಘನೆ ಮಾಡಿದ್ದಲ್ಲಿ, ಸೂಕ್ತ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.