ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಪರಿಣಾಮಗಳು ರಾಜಕೀಯ ವಲಯವನ್ನೂ ತಲುಪುತ್ತಿವೆ.
ಈ ಘಟನೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಗಂಭೀರ ಆರೋಪದ ಬೆನ್ನಲ್ಲೇ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಗೋವಿಂದರಾಜ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಅವರು ಈ ಬಗ್ಗೆ ತುರ್ತು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಹುದ್ದೆಯಿಂದ ಬಿಡುಗಡೆಯಾಗಿ ಗೋವಿಂದರಾಜ್ ರಾಜಕೀಯ ಕಾರ್ಯದರ್ಶಿಯಾಗಿರುವ ಪ್ರಭಾವ ಕಳೆದುಕೊಂಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ “ಕಾಲ್ತುಳಿತ ಹಿಂದೆಯೇ ರಾಜಕೀಯ ಲೋಪಗಳಿವೆ, ಕೆಲವು ಪ್ರಮುಖರು ಇದೇ ಮೂಲಕ ತಪ್ಪುಗಳನ್ನು ಮರೆಮಾಡಲು ಯತ್ನಿಸುತ್ತಿದ್ದಾರೆ” ಎಂಬ ತೀಕ್ಷ್ಣ ವಾಕ್ಯಗಳನ್ನು ಹೊರಹಾಕಿದ್ದರು. ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಚಿನ್ನಸ್ವಾಮಿ ದುರಂತದಲ್ಲಿ ಈಗಾಗಲೇ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿ ಹಲವರನ್ನು ಅಮಾನತುಗೊಳಿಸಲಾಗಿದ್ದು, ಇದೀಗ ರಾಜಕೀಯ ಹುದ್ದೆಯ ಮೇಲೂ ಕತ್ತರಿ ಬೀಳುತ್ತಿದೆ.
ಇದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ಇನ್ನು ಮುಂದೆ ಮತ್ತಷ್ಟು ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯಿದೆ.