ಬೆಂಗಳೂರು: ಮಡದಿಯ ಸಿಸೇರಿಯನ್ ಹೆರಿಗೆಗೆ ಹಣ ನೀಡದ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೊಂಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ಕರ್ನಾಪ್ರಯಾಗ್ ಜಿಲ್ಲಾ ಅಧೀನ ನ್ಯಾಯಾಲಯದ ಈ ಆದೇಶದಲ್ಲಿ 38 ವರ್ಷದ ಕಾಳಮ್ ರಾಮ್ ಅಪರಾಧಿ ಎಂದು ಘೋಷಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜತೆಗೆ, ನ್ಯಾಯಾಲಯ 25 ಸಾವಿರ ರು.ಗಳ ದಂಡವನ್ನು ವಿಧಿಸಿದೆ.
ಆರೋಪಿ ಕಾಳಮ್ ರಾಮ್, ತನ್ನ ತಾಯಿ ಚಂಪಾ ದೇವಿಯ ಬಳಿ ತನ್ನ ಮಡದಿಯ ಸಿಸೇರಿಯನ್ ಹೆರಿಗೆಗಾಗಿ ಹಣ ಕೇಳಲು ಆಕೆ ವಾಸವಿದ್ದ ತನ್ನ ಸಹೋದರನ ಮನೆಗೆ ಬಂದಿದ್ದ. ಈ ವೇಳೆ ಆಕೆಯೊಂದಿಗೆ ಜಗಳ ಮಾಡಿದ್ದ. ಅನಂತರ ಸಮಾಧಾನಗೊಂಡು, ಅಲ್ಲಿಯೇ ಊಟ ಮಾಡಿ ರಾತ್ರಿ ಮಲಗಿದ್ದ. ಆದರೆ, ರಾತ್ರಿ ಇದ್ದಕ್ಕಿದ್ದಂತೆ ಚಂಪಾದೇವಿಯ ಕಿರಿಚಾಟ ಕೇಳಿಬಂದಿತ್ತು.
ಈ ವೇಳೆ ಆತನ ಸಹೋದರ ಮನೆಯಲ್ಲಿರಲಿಲ್ಲ. ಆದರೆ, ಆತನ ಪತ್ನಿ ಊರ್ಮಿಳಾ ದೇವಿ ಮನೆಯಲ್ಲಿ ಇದ್ದು, ಭಯದಿಂದ ಬಾಗಿಲು ಹಾಕಿಕೊಂಡಿದ್ದರು. ತನ್ನ ಪ್ತಿಗೆ ಹಾಗೂ ಗ್ರಾಮದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದ, ಆಕೆ ನ್ಯಾಯಾಲಯದ ಮುಂದೆ ಪ್ರಮುಖ ಸಾಕ್ಷಿಯಾಗಿದ್ದರು. ಆಕೆಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
2022 ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಮರಣವೊಂದಿದ ಮಹಿಳೆಯ ಸೊಸೆ ಊರ್ಮಿಳಾ ದೇವಿ ಪ್ರಮುಖ ಸಾಕ್ಷಿಯಾಗಿದ್ದು, ಆಕೆಯ ಹೇಳಿಕೆಯ ಆಧಾರದಲ್ಲಿ ವಿಚಾರಣೆ ನಡೆಸಲಾಗಿತ್ತು. ಕಾಳಮ್ ರಾಮ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡು, ಮಡದಿಯ ಹೆರಿಗೆಗೆ ಹಣ ನೀಡದ್ದಕ್ಕೆ ಕೋಪದಲ್ಲಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದ. ಹೀಗಾಗಿ, ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.