ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದಾರೆ.
ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಬಿಜೆಪಿ ಘಟನೆಯನ್ನು ಮುಂದಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಘಟನೆಯ ಸಂಪೂರ್ಣ ಹೊಣೆಯನ್ನು ಸರಕಾರದ ಮೇಲೆ ಹಾಕುವ ಮೂಲಕ ಭಾರಿ ಸಂಖ್ಯೆಯಲ್ಲಿ ಇರುವ ಆರ್ಸಿಬಿ ಅಭಿಮಾನಿಗಳ ಆಕ್ರೋಶ ಸರಕಾರ ಕಡೆಗೆ ತಿರುಗುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಘಟನೆಯ ಬಗ್ಗೆ ವಿವರಣೆ ಕೇಳಿದೆ. ಈ ಕಾರ್ಯಕ್ರಮ ಆಯೋಜನೆಯ ಅನಿವಾರ್ಯತೆ ಏನಿತ್ತು. ಸರಕಾರ ಯಾಕೆ ಕಾರ್ಯಕ್ರಮ ಆಯೋಜನೆಯಲ್ಲಿ ಎಡವಿತು. ಭದ್ರತಾ ವೈಫಲ್ಯ ಆಗಿದ್ದೆಲ್ಲಿ, ಇದಕ್ಕೆ ಸಂಬಂಧಿಸಿದಂತೆ ಆಗಿರುವ ಕ್ರಮಗಳೇನು ಎಂಬ ಬಗ್ಗೆ ಹೈಕಮಾಂಡ್ ಮಾಹಿತಿ ಕೇಳಿದ್ದು, ಸಿಎಂ ಹಾಗೂ ಡಿಸಿಎಂ ಗೆ ಬುಲಾವದ ನೀಡಿದೆ.
ಸೋಮವಾರವೀ ದೆಹಲಿಯಲ್ಲಿದ್ದ ಡಿಸಿಎಂ, ವಾಪಸ್ ಆಗುತ್ತಿದ್ದಂತೆ ಬೆಳಗ್ಗೆ ಏಳು ಗಂಟೆಗೆ ಸಿಎಂ ಜತೆಗೆ ದೆಹಲಿಗೆ ಹೊರಡಲಿದ್ದಾರೆ. ಇಬ್ಬರು ಒಂದೇ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಕಾಲ್ತುಳಿತ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಮತ್ಯಾರ ತಲೆದಂಡವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.