ಬೆಂಗಳೂರು: ವೃದ್ಧಾಪ್ಯ ಯೋಜನೆ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳ ಸಂಖ್ಯೆಗೆ ಕಡಿವಾಣ ಹಾಕಲು ಸರಕಾರ ತೀರ್ಮಾನಿಸಿದೆ.
ಈ ಸಾಮಾಜಿಕ ಯೋಜನೆಗಳಲ್ಲಿ ಲಕ್ಷಾಂತರ ಜನ ಫಲಾನುಭವಿಗಳು ಅನಧಿಕೃತವಾಗಿ ನೊಂದಣಿಯಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರ ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಆಯುಕ್ತರು ಸುತ್ತೋಲೆ ಹೊರಡಿಸಿದೆ.
ಸಾಮಾಜಿಕ ಭದ್ರತೆ ಯೋಜನೆಯ ವೃದ್ಧಾಪ್ಯ ಯೋಜನೆಯಡಿ 21.87 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳಿದ್ದು, ಫಲಾನುಭವಿಗಳ ಕುಟುಂಬದ ದತ್ತಾಂಶದ ಅನುಸಾರ ಅನರ್ಹರು ಎಂದು ಗುರುತಿಸಬಹುದಾಗಿದೆ.
ಗರಿಷ್ಠ ವಯೋಮಿತಿಯೊಳಗಿರುವುದು, ಆದಾಯದ ಮಿತಿ ಹೆಚ್ಚಿರುವುದು ಹಾಗೂ ಕುಟುಂಬದ ಸದಸ್ಯರ ಪೈಕಿ ಆದಾಯ ತೆರಿಗೆ ಪಾವತಿ ಮಾಡುವವರು ಈ ಪಟ್ಟಿಯಲ್ಲಿದ್ದಾರೆ. ವೃದ್ಧಾಪ್ಯ ಯೋಜನೆಯಲ್ಲಿ 9.4 ಲಕ್ಷ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯಡಿ 14.15 ಲಕ್ಷ ಫಲಾನುಭವಿಗಳು ಅನರ್ಹರು ಎಂದು ಗುರುತಿಸಲಾಗಿದೆ.
ಇದೀಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಮವಾರು, ತಾಲೂಕುವಾರು ಮತ್ತು ಜಿಲ್ಲಾವಾರು ಮೇಲ್ಕಂಡ ವಿವರಗಳನ್ನು ಭೌತಿಕವಾಗಿ ಪರಿಶೀಲಿಸಿ, ಪಿಂಚಣಿಯನ್ನು ರದ್ದುಗೊಳಿಸಿ ವರದಿ ನೀಡುವಂತೆ ತಹಸೀಲ್ದಾರ್ ಹಾಗೂ ಅಧೀನ ಸಿಬ್ಬಂದಿಗೆ ಸೂಚನೆ ನೀಡುವಂತೆ ಆದೇಶ ಮಾಡಲಾಗಿದೆ.