ಕಲಬುರಗಿ: ನ್ಯಾಯಾಲಯದ ಚೇಂಬರ್ ನಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ನ್ಯಾಯಾಧೀಶರೊಬ್ಬರು ನಿಧನರಾದ ಘಟನೆ ಸೋಮವಾರ ನಡೆದಿದೆ.
ಜಿಲ್ಲಾ ಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂರನೇ ಹಿರಿಯ ಶ್ರೇಣಿಯ ನ್ಯಾಯಾಧೀಶ ವಿಶ್ವನಾಥ್ ಮುಗುಟಿ(44) ಮೃತಪಟ್ಟವರು.
ಇಂದು ಜಿಲ್ಲಾ ಕೋರ್ಟ್ನ ಚೇಂಬರ್ ನಲ್ಲಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಇಲ್ಲಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ನ್ಯಾಯಾಧೀಶ ವಿಶ್ವನಾಥ್ ಮುಗುಟಿ 15 ದಿನಗಳ ಹಿಂದೆಯಷ್ಟೇ ಕಲಬುರಗಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದರು.
ನ್ಯಾ.ವಿಶ್ವನಾಥ್ ಅಗಲಿಕೆಗೆ ಕಲಬುರಗಿ ಜಿಲ್ಲಾ ಬಾರ್ ಅಸೋಸಿಯೇಷನ್ ಕಂಬನಿ ಮಿಡಿದಿದ್ದು, ಸೋಮವಾರ ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಿ ಪ್ರಕಟನೆ ಹೊರಡಿಸಿದೆ.