ಬೆಂಗಳೂರು: ಡ್ರಗ್ ಪೆಡ್ಲರ್ಸ್ಗಳ ಜೊತೆ ನೇರ ನಂಟು ಹೊಂದಿದ್ದ ಇನ್ಸ್ಪೆಕ್ಟರ್ ಸೇರಿ ಪಶ್ಚಿಮ ವಿಭಾಗದ ಎರಡು ಠಾಣೆಗಳ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮಾದಕವಸ್ತು ಸರಬರಾಜು ಮಾರಾಟ ದಂಧೆಯಲ್ಲಿ ತೊಡಗಿರುವುದು ಅಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಚಾಮರಾಜಪೇಟೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ ಮಂಜಣ್ಣ ಅವರನ್ನು ಡಿಸಿಪಿ ಗಿರೀಶ್ ಅವರು ನೀಡಿದ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಚಾಮರಾಜಪೇಟೆ ಠಾಣೆ ಹೆಡ್ ಕಾನ್ ಸ್ಟೇಬಲ್ಗಳಾದ ರಮೇಶ್ ಶಿವರಾಜ್, ಕಾನ್ಸ್ ಟೇಬಲ್ ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಅನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.
ಜಗಜೀವನರಾಮನಗರ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್(ಎಎಸ್ ಐ) ಕುಮಾರ್, ಹೆಡ್ ಕಾನ್ ಸ್ಟೇಬಲ್ ಆನಂದ್ ಸಿಬ್ಬಂದಿ ಬಸವನಗೌಡ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 22 ರಂದು ಮಾದಕವಸ್ತು ಸರಬರಾಜು ಮಾರಾಟ ಮಾಡುತ್ತಿದ್ದ ಆರು ಮಂದಿ ಡ್ರಗ್ ಪೆಡ್ಲರ್ಸ್ ಗಳನ್ನು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿತ್ತು.
ಬಂಧಿತ ಸಲ್ಮಾನ್, ನಯಾಜ್ ಉಲ್ಲಾ ,ನಯಾಜ್ ಖಾನ್ ಸೇರಿ ಆರು ಮಂದಿ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬರುವ ಟೈಡಲ್-100 ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಆರೋಪಿಗಳ ಬಳಿ 1000 ಟೈಡಲ್-100 ಮಾತ್ರೆಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೊಬೈಲ್ ಪರಿಶೀಲನೆಯ ವೇಳೆ ಅಧಿಕಾರಿಗಳಿಗೆ ಆರೋಪಿಗಳು ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ಹಣಕಾಸಿಗೆ ಸಂಬಂಧಿಸಿದ ಮೆಸೇಜ್ ಮಾಡಿರುವುದು ಜತೆಗೆ ಆಡಿಯೋಗಳು ಪತ್ತೆಯಾಗಿದ್ದವು.
ಡ್ರಗ್ ಪೆಡ್ಲರ್ ಜೊತೆ ಪಾರ್ಟಿ: ಅಲ್ಲದೇ ಆರೋಪಿಗಳ ಜತೆಗೆ ಪೊಲೀಸರು ಪಾರ್ಟಿ ಮಾಡಿದ ಫೋಟೋಗಳು ಪತ್ತೆಯಾಗಿದ್ದವು,ಈ ಸಂಬಂಧ ತನಿಖೆಗಾಗಿ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡವಾಗಿ ಡಿಸಿಪಿ ಗಿರೀಶ್ ರಚಿಸಿದ್ದರು.
ಎಸಿಪಿ ಭರತ್ ರೆಡ್ಡಿ ಅವರು ನಡೆಸಿದ ತನಿಖೆಯಲ್ಲಿ ಡ್ರಗ್ ಪೆಡ್ಲರ್ಸ್ ಗಳ ಜತೆ ನಂಟು ಹೊಂದಿದ್ದ ಪೊಲೀಸರು ಮಾಮೂಲಿ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು.
ಕಡಿಮೆ ಬೆಲೆಗೆ ಟೈಡಲ್ ಮಾತ್ರೆ ಖರೀದಿಸಿ 300, 400 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಖರೀದಿಸಿ ಪೊಲೀಸರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದರು. ಪ್ರತಿ ತಿಂಗಳು ಇನ್ಸ್ ಪೆಕ್ಟರ್ ಸೇರಿ ಸಿಬ್ಬಂದಿಗಳಿಗೆ ಹಣ ನೀಡುತ್ತಿದ್ದರು.
ಡ್ರಗ್ ಪೆಡ್ಲರ್ಸ್ ಗಳಿಂದ ಪೊಲೀಸರು ತಮ್ಮ ಸಂಬಂಧಕರ ಖಾತೆಗೂ ಕೂಡ ಹಣ ಹಾಕಿಸಿಕೊಂಡಿರುವ ವಿವರಗಳು ಪತ್ತೆಯಾಗಿ ಪೊಲೀಸರು ದಂಧೆಯಲ್ಲಿ ಭಾಗಿಯ ಸಂಬAಧ ವಿಸ್ತೃತ ತನಿಖೆಯನ್ನು ಕೈಗೊಂಡ ಎಸಿಪಿ ಭರತ್ ರೆಡ್ಡಿ ಅವರು ಡಿಸಿಪಿ ಗಿರೀಶ್ ವಿವರ ವರದಿಯನ್ನು ಲಿಖಿತ ರೂಪದಲ್ಲಿ ನೀಡಿದರು.
ವರದಿಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗೆ ನೀಡಿ ಪರಿಶೀಲನೆ ನಡೆಸಿದ ಗಿರೀಶ್ 1೦ ಮಂದಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಡಿಸಿಪಿ ಗಿರೀಶ್ ಅವರು ನೀಡಿದ ವರದಿ ಆಧರಿಸಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇನ್ಸ್ ಪೆಕ್ಟರ್ ಟಿ. ಮಂಜಣ್ಣ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.