ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಪ್ರಿಯತಮೆಯೇ ಪ್ರಿಯಕರನ ಮೊಬೈಲ್ ಸುಲಿಗೆ ಮಾಡಿಸಿ ಬೆಳ್ಳಂದೂರು ಪೊಲೀಸರ ಅತಿಥಿಯಾಗಿದ್ದಾಳೆ.
ಪ್ರಿಯಕರನ ಕಾರಿಗೆ ಅಪಘಾತ ನಡೆಸಿ ಮೊಬೈಲ್ ಸುಲಿಗೆ ಮಾಡಿಸಿದ್ದ ಸಾಫ್ಟ್ ವೇರ್ ಎಂಜಿನಿಯರ್ ಶೃತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸೆ. 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಯಾಗಿ ಆಕೆಯನ್ನು ಕರೆದುಕೊಂಡು ಬೈಕ್ ನಲ್ಲಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಆರೋಪಿಗಳು ವಂಶಿಕೃಷ್ಣನ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ಜಗಳ ಉಂಟಾಗಿ ವಂಶಿಕೃಷ್ಣರೆಡ್ಡಿ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ಆತನ ಜೊತೆಯಲ್ಲಿಯಿದ್ದ ಶೃತಿಯ ಮೊಬೈಲನ್ನೂ ಕಸಿದು ಪರಾರಿಯಾಗಿದ್ದಾರೆ.
ಸುಲಿಗೆಯ ಬಳಿಕ ದೂರು ಕೊಡುವುದು ಬೇಡ, ಮೊಬೈಲ್ ಹೋದರೆ ಹೋಗಲಿ ಎಂದು ಪ್ರಿಯತಮೆ ಶೃತಿ, ವಂಶಿ ಮುಂದೆ ಡ್ರಾಮ ಮಾಡಿದ್ದಾಳೆ. ಆದರೆ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಶೃತಿ ಡ್ರಾಮಾ ಪತ್ತೆಯಾಗಿದೆ.
ಕಳವಿಗೆ ಕಾರಣ: ಶೃತಿಯೇ ಬೈಕ್ ಗೆ ಡಿಕ್ಕಿ ಮಾಡಿ ಮೊಬೈಲ್ ಕಸಿದುಕೊಳ್ಳಲಿಕ್ಕೆ ಹೇಳಿದ್ದಳು ಎಂಬುದನ್ನು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಇತ್ತೀಚೆಗೆ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸುತ್ತಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್ ನಲ್ಲಿ ಇಬ್ಬರು ಜೊತೆಗಿದ್ದ ಫೋಟೋಗಳಿದ್ದವು.
ಈ ಹಿನ್ನೆಲೆಯಲ್ಲಿ ಫೋಟೊಸ್, ವಿಡಿಯೋಸ್ ಡಿಲೀಟ್ ಮಾಡಿಸಲಿಕ್ಕೆ ಒಂದೂವರೆ ಲಕ್ಷ ಹಣ ಕೊಟ್ಟು ಮೊಬೈಲ್ ರಾಬರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.