ಭಕ್ತಿ ಲೋಕದಲ್ಲಿ ಮಹಾನ್ ಅನುಭವ: ಪಂ. ಪುತ್ತೂರು ನರಸಿಂಹ ನಾಯಕ್ರಿಂದ 3 ದಿನಗಳ ವಿಶೇಷ ಸಂಗೀತ ಕಾರ್ಯಾಗಾರ!
ಬೆಂಗಳೂರು: ದಾಸ ಸಾಹಿತ್ಯ ಮತ್ತು ಭಕ್ತಿ ಸಂಗೀತದ ಮೂಲಕ ಅಪಾರ ಜನಮನ್ನಣೆ ಗಳಿಸಿರುವ ಖ್ಯಾತ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಗೀತ ಕಾರ್ಯಾಗಾರ ನಡೆಯಲಿದೆ.
ಬೆಂಗಳೂರಿನ ಸಂಗೀತಾಸಕ್ತರಿಗಾಗಿ ಪರಮ್ ಸಂಸ್ಥೆಯು ಈ ಒಂದು ಅಪೂರ್ವ ಅವಕಾಶವನ್ನು ಕಲ್ಪಿಸಿದೆ. ‘ದಾಸವಾಣಿ – ಸಂತವಾಣಿ’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಅವರ ಮುಖ್ಯ ಸಂಗೀತ ಕಛೇರಿಗೂ ಮುನ್ನ ಡಿ.10 ರಿಂದ 12ರವರೆಗೆ 3 ದಿನಗಳ ಕಾಲ ವಿಶೇಷ ಸಂಗೀತ ಕಾರ್ಯಾಗಾರವನ್ನು ಪರಮ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ.
ಸಂಗೀತದ ಅನುಭವ ಪಡೆಯಲು ಇದೊಂದು ಅದ್ಭುತ ಅವಕಾಶವಾಗಿದೆ. ಅಲ್ಲದೆ, ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರ ಸಂಗೀತದ ಬಗೆಗಿನ ಒಳನೋಟ ಮತ್ತು ಸಮರ್ಪಣಾ ಮನೋಭಾವವನ್ನು ಕಲಿಯಲು ಉತ್ತಮ ವೇದಿಕೆ ಇದಾಗಲಿದೆ.
ಕಾರ್ಯಾಗಾರ ಎಲ್ಲಿ?:
ಬೆಂಗಳೂರಿನ ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಸಂಜೆ 6 ರಿಂದ 8ರವರೆಗೆ ನಡೆಯಲಿದೆ. ಈ 3 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದವರಲ್ಲಿ ಆಯ್ದ ಕೆಲವರಿಗೆ ಮುಖ್ಯ ಸಂಗೀತ ಕಛೇರಿಯ ಸಮಯದಲ್ಲಿ ಪಂ.ಪುತ್ತೂರು ನರಸಿಂಹ ನಾಯಕ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಆಸಕ್ತರು ಬುಕ್ ಮೈ ಶೋ (Book My Show) ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
ಏನನ್ನು ಕಲಿಯಬಹುದು?
ಪಂ. ಪುತ್ತೂರು ನರಸಿಂಹ ನಾಯಕ್ ಅವರಿಂದ ನೇರವಾಗಿ ದಾಸರಪದಗಳು, ಅಭಂಗ್ಗಳು ಮತ್ತು ಭಜನೆಗಳನ್ನು ಕಾರ್ಯಾಗಾರದಲ್ಲಿ ಕಲಿಯಬಹುದಾಗಿದೆ.
ಡಿ. 13ಕ್ಕೆ ಎಡಿಎ ರಂಗಮಂದಿರದಲ್ಲಿ ಸಂಗೀತ ಕಛೇರಿ:
ಈ ಕಾರ್ಯಾಗಾರದ ಬಳಿಕ ಡಿಸೆಂಬರ್ 13 ರಂದು ಎಡಿಎ ರಂಗಮಂದಿರಲ್ಲಿ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಜೆ 6:30 ರಿಂದ ಮುಖ್ಯ ಸಂಗೀತ ಕಛೇರಿ ನಡೆಯಲಿದೆ. ಇದೇ ವೇಳೆ ಭಾರತದ ಭಕ್ತಿ ಪರಂಪರೆಯ ರತ್ನಗಳಾದ ಕರ್ನಾಟಕದ ದಾಸ ಪರಂಪರೆಯ ಜೀವನ ಪಾಠಗಳು ಮತ್ತು ಇತರ ಸಂತ-ಕವಿಗಳ ಒಳನೋಟದ ರಚನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಸಂಗೀತ ಕಾರ್ಯಕ್ರಮವು ಭಕ್ತಿ, ಚಿಂತನೆ ಮತ್ತು ದೈವ ಭಕ್ತಿಯ ಪಥದ ಕಡೆಗೆ ಮಾರ್ಗದರ್ಶನ ನೀಡುತ್ತದೆ.
ಸಂಗೀತಗಾರರ ತಂಡ:
ಪಂ.ಪುತ್ತೂರು ನರಸಿಂಹ ನಾಯಕ್ ಅವರಿಗೆ ಪ್ರಸಿದ್ಧ ಕಲಾವಿದರ ಸಾಥ್
* ನಾಗರ ಕೃಷ್ಣ ಉಡುಪ – ಕೀಬೋರ್ಡ್
* ಶಿವಲಿಂಗ ರಾಜಾಪುರ – ಬಾನ್ಸುರಿ
* ರಘುನಾಥ್ ಮೈಸೂರು – ತಬಲಾ
* ಗುರುಮೂರ್ತಿ ವೈದ್ಯ – ಪಖಾವಾಜ್
* ವೆಂಕಟೇಶ್ ಪುರೋಹಿತ್ – ಮಂಜೀರಾ
* ಸಾಮಂತ್ ಕಾರ್ಗಲ್ – ಚಿಪ್ಳಿ
* ಸಮಿಕ್ ಶೆಣೈ – ಘುಂಗ್ರೂ


