ಅಪರಾಧ ರಾಜಕೀಯ ಸುದ್ದಿ

ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಿಸಿದ ಎಡಿಜಿಪಿ ಚಂದ್ರಶೇಖರ್ !

Share It

ಬೆಂಗಳೂರು: ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್​ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿದೆ.

ಬಿಎನ್​ಎಸ್​ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಎಚ್​.ಡಿ. ಕುಮಾರಸ್ವಾಮಿ ಆರೋಪಿ ನಂಬರ್​ 1 ಆಗಿದ್ದಾರೆ. ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಆರೋಪಿ ನಂಬರ್​ 2 ಆಗಿದ್ದಾರೆ. ಮತ್ತು ಜೆಡಿಎಸ್​ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್​ 3 ಆಗಿದ್ದಾರೆ.

ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ಅವರು ದೂರಿನಲ್ಲಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ನಿಯಮ ಉಲ್ಲಂಘನೆ ಮಾಡಿ ಸಾಯಿ ಮಿನರಲ್ಸ್​ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್​ಐಟಿ ಎಡಿಜಿಪಿ ಚಂದ್ರಶೇಖರ್​ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಇದಕ್ಕೆ ಎಚ್​.ಡಿ. ಕುಮಾರಸ್ವಾಮಿ ಅವರು, ಹೇಗಾದರೂ ಮಾಡಿ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ಹೂಡಿದ್ದಾರೆ. ಅಧಿಕಾರಿ ಯಾವ ಹಿನ್ನೆಲೆಯಿಂದ ಬಂದವರು? ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ಕೊಡಿ ಎಂದು ನಿಮ್ಮನ್ನು ಐಪಿಎಸ್ ಆಫೀಸರ್ ಮಾಡಿದ್ದಾರಾ? ನಾನು ಬೇಲ್ ತಗೊಂಡೆ, ತನಿಖೆಗೆ ಮಾಡಬೇಡಿ ಎಂದು ಹೇಳಿಲ್ಲ. ನೀವು ಏನ್ ಮಾಡಿದ್ದೀರಿ? ನಿಮ್ಮ ವಿರುದ್ಧವೇ ಕೇಸ್ ಇದೆ, ಆರೋಪಿ ನಂಬರ್ 2. ಹೈಕೋರ್ಟ್​​​ನಲ್ಲಿ ಅಧಿಕಾರಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.

ನಂತರ ಎಡಿಜಿಪಿ ಚಂದ್ರಶೇಖರ್​​ ತಮ್ಮ ಸಿಬ್ಬಂದಿಗೆ ಪತ್ರ ಬರೆದು, ಎಚ್​.ಡಿ. ಕುಮಾರಸ್ವಾಮಿ ಅವರು ನನ್ನ ಮೇಲೆ ಸಾಕಷ್ಟು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ ಮತ್ತು ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಗೆ ನಾವು ನಿರಾಶೆಗೊಳ್ಳಬಾರದರು ಎಂದಿದ್ದರು.

ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ ಎಂದು ಪತ್ರದಲ್ಲಿ ಜಾರ್ಜ್​​ ಬರ್ನಾಡ್​​ ಶಾ ಕೂಡ ಹೇಳಿಕೆ ನೀಡಿದ್ದರು.


Share It

You cannot copy content of this page