ಸುದ್ದಿ

ಕರ್ನಾಟಕಕ್ಕೆ ಮತ್ತೆರಡು ವಂದೇ ಭಾರತ್ ಸ್ಟೋರ್ಸ್ ರೈಲು ಸೇವೆ ಆರಂಭ

Share It

ಬೆಳಗಾವಿ: ಉತ್ತರ ಕರ್ನಾಟಕದ ಜನರಿಗೆ ಗುಡ್‌ನ್ಯೂಸ್‌. ಪುಣೆ-ಬೆಳಗಾವಿ ನಡುವೆ ಮತ್ತು ಪುಣೆ – ಕಲಬುರಗಿ – ಹೈದರಾಬಾದ್‌ ನಡುವೆ ಹೊಸ ವಂದೇ ಭಾರತ್‌ ರೈಲುಗಳ ಸೇವೆ ಶೀಘ್ರ ಆರಂಭವಾಗಲಿದೆ. ಈ ಮೂಲಕ ಕರ್ನಾಟಕದಿಂದ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಹಾಗೂ ಹೈದರಾಬಾದ್‌ಗೆ ರೈಲು ಸಂಚಾರ ಇನ್ನಷ್ಟು ಸುಲಭವಾಗಲಿದೆ.

ಭಾರತೀಯ ರೈಲ್ವೆಯಿಂದ ಮಹಾರಾಷ್ಟ್ರ ಪ್ರಮುಖ ನಗರವಾದ ಪುಣೆಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಪುಣೆಯಿಂದ ಬೆಳಗಾವಿ, ಶೇಗಾಂವ್, ವಡೋದರಾ ಹಾಗೂ ಸಿಕಂದರಾಬಾದ್ (ಹೈದರಾಬಾದ್‌) ನಗರಗಳಿಗೆ ಈ ರೈಲುಗಳು ಸಂಚರಿಸಲಿವೆ.

ಪುಣೆ – ಕಲಬುರಗಿ – ಹೈದರಾಬಾದ್ ವಂದೇ ಭಾರತ್:

ಪುಣೆಯಿಂದ ಹೈದರಾಬಾದ್‌ ಸಿಕಂದರಾಬಾದ್‌ ನಡುವೆ ಆರಂಭಿಸುತ್ತಿರುವ ಹೊಸ ವಂದೇ ಭಾರತ್‌ ರೈಲು ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ದೌಂಡ್, ಸೋಲಾಪುರ ಮತ್ತು ಕಲಬುರಗಿಯಲ್ಲಿ ನಿಲುಗಡೆ ಹೊಂದಲಿದೆ. ಇದರಿಂದ ರೈಲು ಪ್ರಯಾಣದ ಸಮಯ 2 – 3 ಗಂಟೆಗಳಷ್ಟು ಕಡಿಮೆಯಾಗುತ್ತದೆ.

ಪುಣೆ – ಬೆಳಗಾವಿ ವಂದೇ ಭಾರತ್ ರೈಲು: ಈಗಾಗಲೇ ಹುಬ್ಬಳ್ಳಿ, ಬೆಳಗಾವಿ, ಪುಣೆ ನಡುವೆ ವಾರದಲ್ಲಿ ಮೂರು ಬಾರಿ ವಂದೇ ಭಾರತ್‌ ರೈಲು ಸೇವೆ ಇದೆ. ನಿತ್ಯ ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್‌ ಓಡಿಸಬೇಕು ಎಂಬುದು ಇಲ್ಲಿನ ಬೆಳಗಾವಿ ಜನರ ಬೇಡಿಕೆಯಾಗಿತ್ತು. ಸದ್ಯ ರೈಲ್ವೆ ಇಲಾಖೆಯ ಬೆಳಗಾವಿ ಪುಣೆ ನಡುವೆ ಹೊಸ ವಂದೇ ಭಾರತ್‌ ಆರಂಭಿಸಿದೆ. ಸತಾರಾ, ಸಾಂಗ್ಲಿ ಮತ್ತು ಮಿರಜ್‌ನಲ್ಲಿ ಈ ರೈಲು ನಿಲುಗಡೆ ಹೊಂದಲಿದೆ.

ಕರ್ನಾಟಕಕ್ಕೆ ಸಿಕ್ಕ ಈ 2 ವಂದೇ ಭಾರತ್‌ ರೈಲಿನ ಅನುಕೂಲಗಳೇನು?
ಬೆಳಗಾವಿಯು ಕರ್ನಾಟಕದ ಪ್ರಮುಖ ಕೇಂದ್ರವಾಗಿದ್ದು, ಇದು ಪುಣೆಯೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿತ್ಯ ಈ ಮಾರ್ಗದಲ್ಲಿ ಸೆಮಿಹೈಸ್ಪೀಡ್‌ ರೈಲು ಸಂಚಾರ ವಾಣಿಜ್ಯ ಚಟುವಟಿಕೆ ಹೆಚ್ಚಿಸಲಿದೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಮತ್ತೊಂದು ವಂದೇ ಭಾರತ್‌ ರೈಲು ಸಿಕ್ಕಂತಾಗಲಿದೆ.
ಕೊಲ್ಲಾಪುರದಂತಹ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಅನುಕೂಲವಾಗಲಿದೆ.
ಕಲಬುರಗಿಗೆ ಬೆಂಗಳೂರಿಗಿಂತ ಹೈದರಾಬಾದ್‌ ನಗರ ಸಮೀಪದಲ್ಲಿದೆ. ಆ ಭಾಗದ ಹೆಚ್ಚಿನ ಜನ ವ್ಯಾಪಾರ, ಆಸ್ಪತ್ರೆ, ಪ್ರವಾಸ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಿತ್ಯ ಹೈದರಾಬಾದ್‌ಗೆ ತೆರಳುತ್ತಾರೆ. ಈ ಮಾರ್ಗದಲ್ಲಿ ವಂದೇ ಭಾರತ್‌ ಆರಂಭದಿಂದ ಅನುಕೂಲವಾಗಲಿದೆ.

ಪುಣೆ ವಂದೇ ಭಾರತ್‌ ರೈಲುಗಳ ಸಂಖ್ಯೆ 6 ಕ್ಕೆ ಹೆಚ್ಚಾಗಲಿದೆ. ಪ್ರಸ್ತುತ, ಪುಣೆಯಿಂದ ಎರಡು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಪುಣೆ ಕೊಲ್ಲಾಪುರ ಮತ್ತು ಪುಣೆ, ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುತ್ತವೆ. ಈಗ ಹೊಸದಾಗಿ ನಾಲ್ಕು ರೈಲುಗಳು ಪ್ರಾರಂಭವಾಗುವುದರಿಂದ, ಪುಣೆಯಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ ಆರಕ್ಕೆ ಹೆಚ್ಚಲಿದೆ.

ಪುಣೆ -ಶೇಗಾಂವ್ ವಂದೇ ಭಾರತ್ ಈ ರೈಲು ದೌಂಡ್, ಅಹಮದ್‌ನಗರ, ಛತ್ರಪತಿ ಸಂಭಾಜಿನಗರ ಮತ್ತು ಜಲ್ನಾದಲ್ಲಿ ನಿಲುಗಡೆ ಹೊಂದಲಿದೆ. ಇದು ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ತುಂಬಾ ಅನುಕೂಲಕರವಾಗಲಿದೆ. ಅದರಲ್ಲೂ ಮಹಾರಾಷ್ಟ್ರದ ಪ್ರಸಿದ್ಧ ಗಜಾನನ ಮಹಾರಾಜರ ದೇವಸ್ಥಾನದ ದರ್ಶನಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.

ಪುಣೆ – ವಡೋದರಾ ವಂದೇ ಭಾರತ್ ಈ ರೈಲು ಮಹಾರಾಷ್ಟ್ರ ಹಾಗೂ ಗುಜರಾತ್‌ ನಡುವೆ ವೇಗದ ಸಂಪರ್ಕ ಕಲ್ಪಿಸಲಿದೆ. ಲೋನಾವಾಲ, ಪನ್ವೇಲ್, ವಾಪಿ ಮತ್ತು ಸೂರತ್‌ನಲ್ಲಿ ನಿಲುಗಡೆ ಹೊಂದಲಿದೆ. ಇದರಿಂದ ಪುಣೆ ಮತ್ತು ವಡೋದರಾ ನಡುವಿನ ಪ್ರಯಾಣದ ಸಮಯ 9 ಗಂಟೆಗಳಿಂದ 6 – 7 ಗಂಟೆಗಳಿಗೆ ಇಳಿಯುತ್ತದೆ. ಈ ಮಾರ್ಗವು ಮಹಾರಾಷ್ಟ್ರ ಮತ್ತು ಗುಜರಾತ್ ನಡುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಟಿಕೆಟ್‌ ದರ ಎಷ್ಟಿರಬಹುದು?ಈ ಹೊಸ ರೈಲುಗಳ ಟಿಕೆಟ್ ದರಗಳು 1500 ರೂ. – 2000 ರೂ. ಇರಬಹುದು. ಈ ರೈಲುಗಳು ವಂದೇ ಭಾರತ್ ರೈಲುಗಳ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಆರಾಮದಾಯಕ ಆಸನಗಳು, ಸ್ವಯಂಚಾಲಿತ ಬಾಗಿಲುಗಳು, Wi-Fi, ಆಧುನಿಕ ಶೌಚಾಲಯಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ.

ಪುಣೆಯಿಂದ ನಾಗಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸಹ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಹಗಲಿನ ಚೇರ್ ಕಾರ್ ರೈಲಿನಿಂದ ರಾತ್ರಿಯ ಪ್ರಯಾಣಕ್ಕೆ ಅನುಕೂಲವಾಗುವಂತೆ ಸ್ಲೀಪರ್ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಮಾರ್ಗವು ಮಹಾರಾಷ್ಟ್ರದೊಳಗೆ ರಾತ್ರಿಯ ಪ್ರಯಾಣವನ್ನು ಬಯಸುವವರಿಗೆ ಸೂಕ್ತವಾಗಿದೆ.

ಯಾವಾಗ ಆರಂಭ?ಅಧಿಕೃತ ವೇಳಾಪಟ್ಟಿ ಮತ್ತು ರೈಲುಗಳ ಸಂಚಾರದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲಿ ರೈಲ್ವೆ ಇಲಾಖೆ ಮಾಹಿತಿ ನೀಡಲಿದೆ. ಇನ್ನು ಈ ಹೊಸ ಸೇವೆಗಳ ಘೋಷಣೆಯು ಪ್ರಯಾಣಿಕರಿಗೆ ಮತ್ತು ಸ್ಥಳೀಯ ವ್ಯಾಪಾರಗಳಿಗೆ ಸಂತಸ ಉಂಟು ಮಾಡಿದೆ.


Share It

You cannot copy content of this page