ಬೆಂಗಳೂರು: ತಂತ್ರಜ್ಞಾನದ ಪ್ರಗತಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಆಧುನಿಕ ಆವಿಷ್ಕಾರವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇದರ ಸದ್ಬಳಕೆ ಆಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರು ರಾಜಾಜಿನಗರದ ಆರ್.ಪಿ.ಎ. ಪ್ರಥಮದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ -ಅನ್ವಯಿಕೆಗಳು ಮತ್ತು ಪರಿಣಾಮಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಧಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಮತ್ತು ‘ಯಂತ್ರ ಕಲಿಕೆ (ಮಿಷನ್ ಲರ್ನಿಂಗ್) ಭವಿಷ್ಯದ ಅಗತ್ಯವಾಗಿದ್ದು, ಪ್ರೌಢ ಶಾಲಾ ಶಿಕ್ಷಣದಲ್ಲೇ ಇದರ ಅಳವಡಿಕೆ ಮಕ್ಕಳ ಜ್ಞಾನವರ್ಧನೆಗೆ ಇಂಬು ನೀಡುತ್ತದೆ ಎಂದರು.
ಕೃತಕ ಬುದ್ಧಿಮತ್ತೆ ಭವಿಷ್ಯದ ಪರಿಕಲ್ಪನೆಯಲ್ಲ; ಇದು ಈಗ ಬೋಧನೆ ಮತ್ತು ಕಲಿಕೆಯ ತಂತ್ರಗಳನ್ನು ಪರಿವರ್ತಿಸುತ್ತಿದೆ. ವೈಯಕ್ತೀಕೃತ ಕಲಿಕೆಯ ವೇದಿಕೆಗಳು, ಬೋಧನಾ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ಶ್ರೇಣೀಕರಣದಿಂದ ವರ್ಚುವಲ್ ತರಗತಿಗಳವರೆಗೆ ಹಾಗೂ ಚಾಟ್ಬಾಟ್ ಗಳು ಮತ್ತು ಸಂಶೋಧನೆವರೆಗೆ, ಎಐ ಶಿಕ್ಷಣ ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಕ್ರಮೇಣ ಒಳಗೊಳ್ಳುತ್ತಿದೆ ಎಂದರು.
ಇನ್ನು ಮುಂದೆ ಕೃತಕ ಬುದ್ಧಿಮತ್ತೆ ಸಂಶೋಧನಾ ಪ್ರಯೋಗಾಲಯಗಳು ಅಥವಾ ಭವಿಷ್ಯದ ಕಲ್ಪನೆಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಹೇಗೆ ಕಲಿಯುತ್ತೇವೆ, ಕಲಿಸುತ್ತೇವೆ ಮತ್ತು ಸಿದ್ಧತೆ ನಡೆಸುತ್ತೇವೆ ಎಂಬುದರ ಅಡಿಪಾಯವನ್ನು ಮರುರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸ್ಮಾರ್ಟ್ ತರಗತಿಗಳು ಮತ್ತು ಹೊಂದಾಣಿಕೆಯ ಕಲಿಕೆಯ ವೇದಿಕೆಗಳಿಂದ ವರ್ಚುವಲ್ ಸಿಮ್ಯುಲೇಶನ್ ಗಳು ಮತ್ತು ಬುದ್ಧಿವಂತ ಬೋಧನಾ ವ್ಯವಸ್ಥೆಗಳವರೆಗೆ, ಎಐ ಸಾಂಪ್ರದಾಯಿಕ ಶಿಕ್ಷಣ ಮಾದರಿಯನ್ನು ಪರಿವರ್ತಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳೂ ನ್ಯೂಯಾರ್ಕ್, ಟೋಕಿಯೋದ ವಿದ್ಯಾರ್ಥಿಗಳಂತೆ ಎ.ಐ. ಚಾಲಿತ ವೇದಿಕೆಗಳಲ್ಲಿ ಕಲಿಯಲು ಸಾಧ್ಯವಾಗಲಿದೆ ಎಂದರು.
ಭಾರತ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ಬಲವಾದ ಆರ್ಥಿಕ ಬೆಳವಣಿಗೆಯು ದೃಢವಾದ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಮತ್ತು ಬಲವಾದ ಸೇವಾ ವಲಯದ ನೆಲೆಯಿಂದ ಮುನ್ನಡೆಯುತ್ತಿದೆ. ಭಾರತದ ಜನಸಂಖ್ಯೆ ಅದರಲ್ಲೂ ಯುವ ಮತ್ತು ವಿದ್ಯಾವಂತ ಔದ್ಯೋಗಿಕ ಸಾಮರ್ಥ್ಯಕ್ಕೆ ಎಐ ಖಂಡಿತವಾಗಿಯೂ ಪರಿವರ್ತಕ ಶಕ್ತಿಯಾಗಬೇಕು. ಉದ್ಯೋಗ ವಂಚನೆ ಭೀತಿ ಎದುರಾಗಬಾರದು ಎಂದರು.
ಇಂದಿನ ಯುಗಮಾನದ ಅಗತ್ಯಗಳಿಗೆ ತಕ್ಕಂತೆ ನಮ್ಮನ್ನು ನಾವು ನವೀಕರಿಸಿಕೊಳ್ಳದಿದ್ದರೆ ಮತ್ತು ಟೆಕ್-ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರಗತಿಗಳಿಗೆ ಹೊಂದಿಕೊಳ್ಳದಿದ್ದರೆ, ನಾವು ಹಿಂದೆ ಬೀಳುತ್ತೇವೆ ಅದನ್ನು ಮನಗಾಣಬೇಕು ಎಂದರು.
ಸುಸ್ಥಿರ ಅಭಿವೃದ್ಧಿಗೆ ಸುಧಾರಿತ ತಂತ್ರಜ್ಞಾನ ಸಹಕಾರಿ:
ಸುಧಾರಿತ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯಿಲ್ಲದೆ ಬಹು-ವಲಯ ಸುಸ್ಥಿರ ಅಭಿವೃದ್ಧಿಯ ಒಟ್ಟಾರೆ ಕಲ್ಪನೆಯನ್ನು ತರಲು ಸಾಧ್ಯವಿಲ್ಲ. ಪ್ರಗತಿಯೂ ಆಗಬೇಕು, ಪರಿಸರವೂ ಉಳಿಯಬೇಕು ಈ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಯ ಸಂಪೂರ್ಣ ಪರಿಕಲ್ಪನೆಯು ಸಮಗ್ರ ಅಭಿವೃದ್ಧಿ ಮತ್ತು ಸುಧಾರಣೆಯ ಸೋಪಾನವಾಗಬೇಕು ಎಂದು ಪರಿಸರ ಸಚಿವರೂ ಆದ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಭಾರತವು ತಂತ್ರಜ್ಞಾನದಲ್ಲಿ ಜಾಗತಿಕ ಮುಂದಾಳುವಾಗುವ ಹೊಸ್ತಿಲಲ್ಲಿದೆ. ಆದರೆ ನಮ್ಮ ಶಕ್ತಿ ಎಂಜಿನಿಯರ್ ಗಳು ಮತ್ತು ನಾವೀನ್ಯಕಾರರನ್ನು ಉತ್ಪಾದಿಸುವುದಷ್ಟೇ ಆಗಬಾರದು, ನೈಜ-ಪ್ರಪಂಚದ ಸವಾಲುಗಳನ್ನು ಪರಿಹರಿಸಲು ಎಐ ಅನ್ನು ಬಳಸಬಹುದಾದ ದೂರದೃಷ್ಟಿಯ ನಾಯಕರನ್ನು ಸಿದ್ಧಪಡಿಸುವಂತಾಗಬೇಕು ಎಂದರು.
ಇಂದಿನ ವಿಚಾರ ಸಂಕಿರಣದಲ್ಲಿ ಹೊರಹೊಮ್ಮುವ ಫಲಶ್ರುತಿ ವಿದ್ಯಾರ್ಥಿಗಳಿಗೆ, ಬೋಧಕರಿಗೆ, ಒಟ್ಟಾರೆ ಶಿಕ್ಷಣ ರಂಗಕ್ಕೆ ಉಪಯುಕ್ತವಾಗಲಿ ಎಂದು ಹಾರೈಸಿದರು.