ಬೆಂಗಳೂರು: ತೆರಿಗೆ ಪಾವತಿಸದೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಗಳ ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, 30ಕ್ಕೂ ಹೆಚ್ಚು ಖಾಸಗಿ ಬಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯ ಸಾರಿಗೆ ಅಧಿಕಾರಿಗಳ ತಂಡ ನಡೆಸಿದ ಕ್ಷೀಪ್ರ ಕಾರ್ಯಚರಣೆಯಲ್ಲಿ ಅಪರ ಸಾರಿಗೆ ಆಯುಕ್ತಾರಾದ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತರಾದ ಶ್ರೀಮತಿ ಶೋಭಾ ಹಾಗೂ ಗಾಯತ್ರಿ ನೇತೃತ್ವದ ತಂಡ ಭಾಗಿಯಾಗಿತ್ತು.
ನಗರದ ಹೊರವಲಯದಲ್ಲಿರುವ ಅತ್ತಿಬೆಲೆ ಚೆಕ್ಪೋಸ್ಟ್ ನಲ್ಲಿ ತಪಾಸಣೆ ನಡೆಸಿದ ತಂಡ ರಾಜ್ಯ ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸದೆ ಪ್ರಯಾಣಿಕರನ್ನ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಖಾಸಗಿ ಬಸ್ ಗಳ ವಶಕ್ಕೆ ಪಡೆಯಿತು.
ಕೇವಲ ಅರ್ಜಿ ಹಣ ಪಾವತಿಸಿ ತೆರಿಗೆಯನ್ನು ಪಾವತಿಸದೆ ರಾಜ್ಯದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರಿಂದ ಹಣ ಸಂಗ್ರಹಿಸದೆ ಹಾಗೂ ಅವರ ನಿರ್ಧರಿತ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು.
ಮೋಟಾರು ವಾಹನ ನಿರೀಕ್ಷಕರಾದ ನವೀನ , ವಿಶ್ವನಾಥ್ ಶೆಟ್ಟಿ, ಅಮೂಲ್ಯ, ಸುಧಾಕರ್, ನರಸಿಂಹ ಮೂರ್ತಿ ಹಾಗೂ ರಾಜೇಶ್, ಆರ್ ಟಿ ಓ ಗಳಾದ ದೀಪಕ್, ಪ್ರಮಾತೇಶ ಹಾಗೂ ರಾಜಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

