ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಸಭೆಗಳ ನೇರಪ್ರಸಾರ ಆಯೋಜನೆಗೆ ಅಗತ್ಯ ದತ್ತಾಂಶ ಸಂಗ್ರಹ ಮಾಡುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಗ್ರಾಮ ಪಂಚಾಯತಿ ಕಲಾಪಗಳ ನೇರ ಪ್ರಸಾರದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಚುನಾಯಿತ ಜನಪ್ರತಿನಿಧಿಗಳ ಹೆಸರು, ಹುದ್ದೆ, ಮೊಬೈಲ್ ಸಂಖ್ಯೆ ಸೇರಿ ಇತರೆ ಮಾಹಿತಿಗಳ ಸಂಗ್ರಹಕ್ಕೆ ಸೂಚಿಸಲಾಗಿದೆ.
ಈ ದತ್ತಾಂಶದ ಆಧಾರದಲ್ಲಿ ಸಭೆಯ ವೇಳೆ ಅವರ ಹೆಸರು, ಹುದ್ದೆ ಮೊದಲಾದ ಮಾಹಿತಿ ಪ್ರಕಟ ಮಾಡಲಾಗುತ್ತದೆ. ಇದಕ್ಕೆ ಒಪ್ಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪತ್ರ ನೀಡಬೇಕಾಗಿದೆ. ಈ ಕಲಾಪಗಳನ್ನು ಇಲಾಖೆಯ ಪಂಚತಂತ್ರ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಾಗುತ್ತದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇ ಆಡಳಿತ ವಿಭಾಗ ಈ ಎಲ್ಲ ಪ್ರಕ್ರಿಯೆಗಳನ್ನು ನಿಭಾಯಿಸಲಿದ್ದು, ಅದಕ್ಕಾಗಿ ಅಗತ್ಯ ದತ್ತಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಪಂಚಾಯತಿಗಳು ಸಹಕರಿಸಬೇಕು ಹಾಗೂ ಅವರಿಗೆ ಸಂಬಂಧಪಟ್ಟ ಅಧಿಕಾರಿಗಳು ಈ ಮೂಲಕ ಸೂಚನೆ ನೀಡಬೇಕು ಎಂದು ಇ- ಆಡಳಿತದ ನಿರ್ದೇಶಕ ಸ್ವರೂಪ್ ಟಿ.ಕೆ. ಸುತ್ತೋಲೆಯಲ್ಲಿ ತಿಳಿಸಿದ್ದಾರೆ.