ಬೆಂಗಳೂರು: ಜಾತಿ ಸಮೀಕ್ಷೆ ವರದಿಯನ್ನು ಮರು ಸಮೀಕ್ಷೆ ನಡೆಸುವಂತೆ ಹೈಕಮಾಂಡ್ ಸೂಚಿಸಿರುವ ಬೆನ್ನೆಲ್ಲೆ ಇಂದು ಮಹತ್ವದ ಕ್ಯಾಬಿನೆಟ್ ಸಭೆ ನಡೆಯುತ್ತಿದೆ. ಸಭೆಯಲ್ಲಿ ಹೈಕಮಾಂಡ್ ತೀರ್ಮಾನವನ್ನು ಬಹುತೇಕ ಸಚಿವರು ವಿರೋಧಿಸಿದ್ದಾರೆ ಎನ್ನಲಾಗಿದೆ.
2013 ರಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು, ಜಾತಿಗಣತಿಗೆ ಆದೇಶ ನೀಡಿದ್ದರು. ಅದರ ಪರಿಷ್ಕೃತ ವರದಿಯನ್ನು ಜಯಪ್ರಕಾಶ್ ಹೆಗ್ಡೆ ಸರಕಾರದ ಮುಂದೆ ಮಂಡನೆ ಮಾಡಿದ್ದರು. ಸರಕಾರ ಅದನ್ನು ಅಂಗೀಕರಿಸಿದ್ದು, ಕೆಲ ಪ್ರಬಲ ಜಾತಿಗಳು ವರದಿಯನ್ನು ವಿರೋಧಿಸಿದ್ದವು.
ಈ ನಡುವೆಯೂ ವರದಿ ಜಾರಿ ಮಾಡಿಯೇ ಸಿದ್ಧ ಎಂದು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅವರು, ಇದೀಗ ಹೈಕಮಾಂಡ್ ಸೂಚನೆಯ ಮೇರೆಗೆ ಮರುತನಿಖೆಗೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯದ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ವರದಿಯನ್ನು ತಯಾರಿಸಲು 165 ಕೋಟಿ ರು. ಖರ್ಚು ಮಾಡಲಾಗಿದೆ. ಈಗ ವರದಿ ತಯಾರು ಮಾಡಲು ಸುಮಾರು 300 ಕೋಟಿ ಖರ್ಚು ಮಾಡಬೇಕಾಗುತ್ತದೆ. ಇಷ್ಟು ಹಣವನ್ನು ಎರಡ ಸಮುದಾಯಗಳ ಒತ್ತಡಕ್ಕೆ ಮಣಿದು ವ್ಯರ್ಥ ಮಾಡುವುದು ಎಷ್ಟು ಸರಿ ಎಂದು ಕೆಲವರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಈ ನಡುವೆ ಬಿಜೆಪಿ ನಾಯಕರು RCB. ದುರಂತ ಮರೆಮಾಚಲು ಜಾತಿಗಣತಿ ಅಸ್ತ್ರವನ್ನು ಮುನ್ನಲೆಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡುವ ಕಾಂಗ್ರೆಸ್ ಜನರ ಭಾವನೆಗೆ ಬೆಲೆ ಕೊಡುವುದಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.