ಯಾದಗಿರಿ: ಯಾದಗಿರಿ ನಗರದ ಕನಕ ವೃತ್ತದ ಬಳಿ ಇರುವ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಶುಕ್ರವಾರ (ಮೇ 23) ಮಧ್ಯರಾತ್ರಿ ಸಂಭವಿಸಿದ್ದಾಗಿ ಶಂಕಿಸಲಾಗಿದೆ. ಪೆಟ್ರೋಲ್ ಸುರಿದು ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಪರಿಚಿತ ವ್ಯಕ್ತಿಗಳು ಸುಮಾರು 20 ಲೀಟರ್ ಪೆಟ್ರೋಲ್ ಅನ್ನು ಕ್ಯಾನ್ನಲ್ಲಿ ತಂದು ಬೆಂಕಿ ಹಚ್ಚಿದ ಬಳಿಕ ಸ್ಥಳದಲ್ಲಿ ಕ್ಯಾನ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಪೊಲೀಸರ ಪ್ರಕಾರ, ಕಚೇರಿಯ ಫರ್ನಿಚರ್ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ. ಸೋಫಾ, ಎಸಿ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಘಟನೆಯ ಮಾಹಿತಿ ತಿಳಿದ ನಂತರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ಪಕ್ಷದ ನಾಯಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಕಾಂಗ್ರೆಸ್ಶಾಸಕ ಚನ್ನರೆಡ್ಡಿ ಪಾಟೀಲ ತುಣ್ಣೂರ ಅವರು ಮಾತನಾಡುತ್ತಾ, ಈ ಘಟನೆ ಶುಕ್ರವಾರ (ಮೇ 23) ಮಧ್ಯರಾತ್ರಿ ನಡೆದಿದೆ ಎಂದರು. ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ಈ ಬೆಂಕಿ ಹಚ್ಚುವ ಘಟನೆ ಯಾದಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭವಿಸಿದ್ದು, ಆಸ್ತಿಗೆ ಭಾರೀ ಹಾನಿ ಉಂಟಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಆಂಪೂರ್ ಅವರು ಈ ಕುರಿತು ಮಾಹಿತಿ ನೀಡಿದರು.
ಈ ಘಟನೆ ಮೇ 23, 2025ರ ರಾತ್ರಿ ಸಂಭವಿಸಿದ್ದು, ಮೇ 24, 2025ರ ಬೆಳಗ್ಗೆ ಸುಮಾರು 7:15ಕ್ಕೆ ಬೆಳಕಿಗೆ ಬಂದಿದೆ.
ಕಚೇರಿಗೆ ಭಾರೀ ಹಾನಿಯಾಗಿದ್ದು, ಫರ್ನಿಚರ್ ಹಾಗೂ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ.
ಈ ಸಂಬಂಧ ಮಾಜಿ ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಗೂಳಿ ಅವರ ಪತಿ ಶಂಕರ್ ಗೂಳಿ (50 ವರ್ಷ) ಅವರನ್ನು ಶಂಕಿತ ಆರೋಪಿಯಾಗಿ ಬಂಧಿಸಲಾಗಿದೆ. ಬಾಪು ಗೌಡ (55 ವರ್ಷ) ಎಂಬುವವರು ಘಟನೆಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದಾರೆ
ಘಟನೆಯ ಹಿಂದೆ ಇರುವ ನಿಖರ ಉದ್ದೇಶ ಏನೆಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆಯ ಪೊಲೀಸರು ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಸುಕ್ಷ್ಮ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಆಂಪೂರ್ ಅವರಿಂದ ದೂರು ನೀಡಲಾಗಿದ್ದು, ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 324(5) ಮತ್ತು 326(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.