ಬೆಂಗಳೂರು: ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಆನೇಕಲ್ನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಸೇರಿ ಬಹು ಕ್ರೀಡಾ ಸಂಕೀರ್ಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯತ್ತ ಹೆಜ್ಜೆ ಇಟ್ಟಿದೆ.
ಇದರಿಂದ ಆನೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನಗರ ಕೇಂದ್ರದೊಂದಿಗೆ ಉತ್ತಮ ಸಾರಿಗೆ ಸಂಪರ್ಕ ದೊರೆಯಲಿದೆ.
ಕ್ರೀಡಾ ಸಂಕೀರ್ಣಕ್ಕೆ ಸುಲಭ ಸಂಚಾರ
ಬನ್ನೇರುಘಟ್ಟ ರಸ್ತೆ ಮಾರ್ಗವಾಗಿ ಸಾಗುವ ಕಾಳೇನ ಅಗ್ರಹಾರ–ಕಾಡುಗೋಡಿ ನಡುವಿನ ಸುಮಾರು 68 ಕಿಲೋಮೀಟರ್ ಮೆಟ್ರೋ ಮಾರ್ಗವನ್ನು ಜಿಗಣಿಯಿಂದ ಶಾಖೆಗೊಳಿಸಿ, ಆನೇಕಲ್ ದಿಕ್ಕಿನಲ್ಲಿ ಸುಮಾರು 3 ರಿಂದ 4 ಕಿಲೋಮೀಟರ್ ವಿಸ್ತರಿಸುವ ಪ್ರಸ್ತಾವನೆ ಇದೆ.
ಈ ವಿಸ್ತರಣೆ ಮೂಲಕ ಬನ್ನೇರುಘಟ್ಟ ಹಾಗೂ ಆನೇಕಲ್ ಭಾಗಗಳಿಂದ ಬರುವ ಜನರಿಗೆ ಸೂರ್ಯ ಸಿಟಿಯಲ್ಲಿ ನಿರ್ಮಾಣಗೊಳ್ಳುವ ಕ್ರೀಡಾ ಸಂಕೀರ್ಣಕ್ಕೆ ತಲುಪುವುದು ಸುಲಭವಾಗಲಿದೆ. ಮೂಲ ಮಾರ್ಗವು ತನ್ನ ನಿಗದಿತ ದಿಕ್ಕಿನಲ್ಲಿ ಮುಂದುವರಿಯಲಿದ್ದು, ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ವೃತ್ತ ಹಾಗೂ ವರ್ತೂರು ಕೋಡಿ ಪ್ರದೇಶಗಳಿಗೆ ಸಂಪರ್ಕ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹು ಕ್ರೀಡಾ ಸಂಕೀರ್ಣ ಯೋಜನೆ ಹಿನ್ನೆಲೆ
ಕಳೆದ ಜೂನ್ ತಿಂಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಯ ನಂತರ, ಗೃಹ ಮಂಡಳಿ ಆನೇಕಲ್ ತಾಲ್ಲೂಕಿನ ಸೂರ್ಯನಗರ ನಾಲ್ಕನೇ ಹಂತದಲ್ಲಿ ಸುಮಾರು 75 ಎಕರೆ ಪ್ರದೇಶದಲ್ಲಿ ₹1,650 ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಬಹು ಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಿದೆ.
ಕಾರ್ಯಸಾಧ್ಯತಾ ಅಧ್ಯಯನ ಪೂರ್ಣ
ಮೆಟ್ರೋ ವಿಸ್ತರಣೆ ಸಂಬಂಧ ದೆಹಲಿ ಮೂಲದ ಇಟ್ರೋಸಾಫ್ಟ್ ಸೊಲ್ಯೂಶನ್ಸ್ ಪ್ರೈ. ಲಿಮಿಟೆಡ್ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ಮಾರ್ಗದ ವಿನ್ಯಾಸ, ಪ್ರಯಾಣಿಕರ ನಿರೀಕ್ಷಿತ ಸಂಖ್ಯೆಗಳು, ಭೂಸ್ವಾಧೀನ, ಯೋಜನಾ ವೆಚ್ಚ ಹಾಗೂ ಮಧ್ಯದ ನಿಲ್ದಾಣಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ.
ಸುಮಾರು 3.5 ಕಿಲೋಮೀಟರ್ ಉದ್ದದ ಈ ಹೊಸ ಮಾರ್ಗವನ್ನು ಕ್ರೀಡಾ ಸಮುಚ್ಛಯಕ್ಕೆ ಸಂಪರ್ಕಿಸುವ ಮೂಲಕ ಒಟ್ಟು ಮೆಟ್ರೋ ಮಾರ್ಗದ ಉದ್ದ ಸುಮಾರು 72 ಕಿಲೋಮೀಟರ್ ಆಗಲಿದೆ ಎಂದು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

