ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದಲೇ ಇನ್ಸ್ಟಾಗ್ರಾಂ ಮೂಲಕ ಸಾಕ್ಷಿದಾರನೊಬ್ಬನಿಗೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ಮತ್ತೆ ರೌಡಿಗಳ ಮೊಬೈಲ್ಗಳು ಸಕ್ರಿಯವಾಗಿದೆ ಎನ್ನಲಾಗಿದೆ. ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮು ಎಂಬಾತನಿಂದ ಬೆದರಿಕೆ ಪ್ರಕರಣದ ಸಾಕ್ಷಿದಾರನಾದ ಆಟೋ ಚಾಲಕ ಅರ್ಮುಗಂಗೆ ಸೆ. 22ರಂದು ಸಲಗ ಸೋಮ ಎಂಬ ಹೆಸರಿನ ಇನ್ ಸ್ಟಾಗ್ರಾಂ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಬಂದಿತ್ತು.
ಅದರಲ್ಲಿ ಜೋಸೆಫ್ ಬಾಬು ಕೊಲೆ ಕೇಸ್ನಲ್ಲಿ ಯಾರೊಬ್ಬರೂ ಕೋರ್ಟ್ ನಲ್ಲಿ ಸಾಕ್ಷಿ ಹೇಳಬಾರದು. ಬಬ್ಲಿ ಹೆಂಡತಿ, ಸುನೀಲ ಮತ್ತು ನಾದನಿಗೂ ಈ ಮೇಸೆಜ್ ತಲುಪಿಸು. ನಾನು ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎಂದು ಆರ್ಮುಗಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ವಿವೇಕನಗರದಲ್ಲಿ ನಡೆದ ರೌಡಿ ಮಿಲ್ಟಿ ಸತೀಶ್ ಹತ್ಯೆ ಬಗ್ಗೆ ಆರೋಪಿ ಮಾತನಾಡಿದ್ದು, ನಾವು ಜೈಲಿನಲ್ಲಿದ್ದುಕೊಂಡೇ ಮಿಲ್ಟಿ ಸತೀಶನ ಹೊಡೆಸಿದ್ದು ಗೊತ್ತಲ್ಲಾ? ನಮ್ಮ ಬಾಸ್ ಯಾರು ಗೊತ್ತಲ್ಲಾ ಶಿವ? ಅವನು ಹೇಳಿದಾಗೆ ಕೇಳದೆ ಇದ್ದರೆ ಯಾರನ್ನೂ ಉಳಿಸುವುದಿಲ್ಲ. ಆಟೋ ಓಡಿಸುವ ನಿನ್ನನ್ನೂ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.