ಹಬ್ಬಗಳ ಹಿನ್ನೆಲೆ ನೈಋತ್ಯ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರ
ಬೆಂಗಳೂರು: ಸಾಲು ಸಾಲಾಗಿ ಬರುತ್ತಿರುವ ಗೌರಿ ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿನ್ನೆಲೆ ನೈಋತ್ಯ ರೈಲ್ವೆ ಇಲಾಖೆ ರಾಜ್ಯಾದ್ಯಂತ 22 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ವಿಶೇಷ ರೈಲುಗಳ ವೇಳಾಪಟ್ಟಿ, ಪ್ರಯಾಣದ ಸಮಯಗಳನ್ನು ಹಂಚಿಕೊಂಡಿದೆ.
ಗಣೇಶ ಹಬ್ಬದ ವಿಶೇಷ ರೈಲುಗಳ ವಿವರ
ಸೆಪ್ಟೆಂಬರ್ 5ರಿಂದ 7 ರವರೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರ ನಡೆಸಲಿದೆ. ಬೆಂಗಳೂರು ಕಲಬುರಗಿ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:40 ಕ್ಕೆ ಕಲಬುರಗಿಗೆ ತಲುಪಲಿದೆ.
ಅದೇ ರೀತಿ, ಸೆಪ್ಟೆಂಬರ್ 6 ರಿಂದ 8 ರವರೆಗೆ, ಕಲಬುರಗಿಯಿಂದ ಹಿಂತಿರುಗುವ ರೈಲು ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 8:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಇಪ್ಪತ್ತೆರಡು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ದೀಪಾವಳಿ ವಿಶೇಷ ರೈಲುಗಳ ವಿವರ
ಅ. 30 ಮತ್ತು ನ.2ರಂದು ಮೈಸೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ವಿಜಯಪುರದಿಂದ ಮೈಸೂರಿಗೆ ಹಿಂದಿರುಗುವ ರೈಲು ಅ.31 ಮತ್ತು ನ.3 ರಂದು ಸಂಚರಿಸಲಿದೆ. ಜತೆಗೆ, ಅಕ್ಟೋಬರ್ 31 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ನ.1, ಅ.31 ಮತ್ತು ನವೆಂಬರ್ 3 ರಂದು ಹಿಂದಿರುಗಲಿವೆ.
ದಸರಾ ವಿಶೇಷ ರೈಲುಗಳ ವಿವರ
ದಸರಾ ಹಬ್ಬದ ಪ್ರಯುಕ್ತ ಅ.9 ಮತ್ತು 12 ರಂದು ಎಸ್ಎಂವಿಟಿ ಬೆಂಗಳೂರಿನಿAದ ವಿಜಯಪುರಕ್ಕೆ ವಿಶೇಷ ರೈಲುಗಳು ಇರಲಿವೆ. ಅ.10 ಮತ್ತು 13 ರಂದು ರೈಲುಗಳು ಹಿಂತಿರುಗಲಿವೆ. ಅ.9 ಮತ್ತು 12 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿದ್ದು, ಅ.10 ಮತ್ತು 13 ರಂದು ಹಿಂದಿರುಗಲಿವೆ.
ಇದಲ್ಲದೆ, ಅ.3 ರಿಂದ 13 ರವರೆಗೆ ಮೈಸೂರು-ಕೆಎಸ್ಆರ್ ಬೆಂಗಳೂರು ಮಾರ್ಗದಲ್ಲಿ ಮತ್ತು ಅ.10 ರಿಂದ 14 ರವರೆಗೆ ಕೆಎಸ್ಆರ್ ಬೆಂಗಳೂರು-ಮೈಸೂರು ವಿಶೇಷ ರೈಲುಗಳು ಚಲಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.


