ಸುದ್ದಿ

ಪ್ರಶಸ್ತಿ ಮತ್ತು ಸನ್ಮಾನಗಳು ಸಾಧಕರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ: ಉದಂತ ಶಿವಕುಮಾರ್

Share It

ಬೆಂಗಳೂರು: ಸಮ್ಮಿಲನ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಗುರೂಜಿ ಮನೆ ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರು, ನಂದಿನಿ ಬಡಾವಣೆಯ ಶಿವಾನಂದನಗರದಲ್ಲಿ ಪತ್ತೆದಾರಿ ಸಾಹಿತಿ ಎನ್ ನರಸಿಂಹಯ್ಯನವರ ಜನ್ಮ ಶತಮಾನ ವರ್ಷಾಚರಣೆ, ಮನೆಯಂಗಳದಲ್ಲಿ ದಸರಾ ಕವಿಗೋಷ್ಠಿ, ಗೀತ ಗಾಯನ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕವಿ ಮತ್ತು ಲೇಖಕ ಉದಂತ ಶಿವಕುಮಾರ್ ಮಾತನಾಡಿ “ಸಾಧಕರನ್ನು ಗುರುತಿಸಿ ಗೌರವಿಸುವ ವೇದಿಕೆಗಳು ಸನ್ಮಾರ್ಗವಾದರೆ, ಸಾಧಕರು ಸಮಾಜಕ್ಕೆ ಮಾರ್ಗದರ್ಶಕರು” ಎಂದರು. ಸನ್ಮಾನ ಮತ್ತು ಪ್ರಶಸ್ತಿಗಳು ಸಾಧಕರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಾಧನೆ ಸಮಾಜಕ್ಕೆ ದೊರಕುತ್ತದೆ. ಇದರಿಂದ ಒಳಿತಾಗುತ್ತದೆ. ಎಂದು ಹೇಳಿದರು.

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಮಾತನಾಡಿ ಕನ್ನಡ ಕೆಲಸಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಸಂಘಟನೆಯ ಮೂಲಕ ಕನ್ನಡ ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವಾಧ್ಯಕ್ಷರಾದ ಬಿ. ಶೃಂಗೇಶ್ವರ ರವರು ಪ್ರಶಸ್ತಿ ಪ್ರಧಾನವನ್ನು ನೆರವೇರಿಸಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ.ವಿಜಯಲಕ್ಷ್ಮಿ ಸತ್ಯಮೂರ್ತಿಯವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ಉದಂತ ಶಿವಕುಮಾರ್ ಮತ್ತು ತುಮಕೂರು ವೈ ಶ್ರೀನಿವಾಸ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕರಾದ ಹನಿಕವಿ, ಸಮ್ಮಿಲನದ ಸಂಸ್ಥಾಪಕರಾದ ಕುವರ ಯಲ್ಲಪ್ಪ ನವರು ಹಾಗೂ ಗುರೂಜಿ ಮನೆಯ ದೀಪಾವಿಕ್ರಮ್ ಮತ್ತು ವಿಕ್ರಮ್ ಬಾಬು ದಂಪತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕವಿಗಳು ಕವಿತೆ ವಾಚನ ಮಾಡಿದರು. ಮತ್ತು ನವರಾತ್ರಿಯ ಪ್ರಯುಕ್ತ ವೈ.ಎಸ್. ಕೃಷ್ಣಮೂರ್ತಿಯವರು, ರೇಣುಕಾರವರು, ಟಿ.ಕೆ. ವೆಂಕಟರಾಮ್ ಭಾರತಿ, ಎನ್. ಆರ್. ವೆಂಕಟರಂಗನ್ ರವರು ಬಿ.ಎನ್. ಮಹದೇವ್ ರವರು ನವದುರ್ಗೆಯರನ್ನು ಕುರಿತು ಗೀತಗಾಯನವನ್ನು ಸುಶ್ರಾವ್ಯವಾಗಿ ಹಾಡಿದರು.

ಈ ಸಂದರ್ಭದಲ್ಲಿ “ಪತ್ತೆದಾರಿ ಸಾಹಿತಿ ಎನ್ ನರಸಿಂಹಯ್ಯ ಸ್ಮಾರಕ ಪ್ರಶಸ್ತಿ”ಯನ್ನು ಖ್ಯಾತ ಕಾದಂಬರಿಗಾರ್ತಿ ಡಾ. ಕೆ. ವಿ. ರಾಜೇಶ್ವರಿ ಅವರಿಗೆ ನೀಡಲಾಯಿತು. ಹಾಗೂ “ಗುರೂಜಿ ರಾಜಲಕ್ಷ್ಮಮ್ಮ ಸ್ಮಾರಕ ಪ್ರಶಸ್ತಿ”ಯನ್ನು ರಂಗಭೂಮಿ ಕಲಾವಿದರಾದ ಬಿ. ಎನ್. ಸತ್ಯನಾರಾಯಣ, ನೃತ್ಯ ಉಪನ್ಯಾಸಕರಾದ ಡಾ. ರಾಧಿಕಾ ರಂಜಿನಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಛಾಯಾ ಟೀಚರ್, ಸಾಹಿತಿ ರೂಪ ಸುದೀರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಿಳಾ ಉದ್ಯಮಿ ಪ್ರೇಮಕುಮಾರಿ ಬಸವರಾಜು ಇವರಿಗೆ ನೀಡಿ ಗೌರವಿಸಲಾಯಿತು.

ವೆಂಕಟರಾಮ್ ಭಾರತಿ ಅವರು ನಿರೂಪಣೆ ಮಾಡಿದರು. ಕುವರ ಯಲ್ಲಪ್ಪ ನವರು ಸ್ವಾಗತಿಸಿದರು, ವಿಕ್ರಮ್ ಬಾಬು ಅವರು ವಂದನಾರ್ಪಣೆ ಮಾಡಿದರು.


Share It

You cannot copy content of this page