ಬಸವರಾಜ ಬೊಮ್ಮಾಯಿಯವರಿಗಿಂತ ಹೆಚ್ಚು ಮತಗಳ ಅಂತರದಿಂದ ಭರತ ಬೊಮ್ಮಾಯಿ ಗೆಲ್ಲುತ್ತಾರೆ: ಚನ್ನಮ್ಮ ಬಸವರಾಜ ಬೊಮ್ಮಾಯಿ
ಹಾವೇರಿ( ಸವಣೂರು): ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ತಂದೆ ಬಸವರಾಜ ಬೊಮ್ಮಾಯಿ ಅವರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಚನ್ನಮ್ಮ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸವಣೂರು ತಾಲೂಕಿನ ತೇವರ ಮೆಳ್ಳಿಹಳ್ಳಿ, ಹಲಸೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಕ್ಷೇತ್ರದ ಜನರ ಆಶಯದಂತೆ ಭರತ ಬೊಮ್ಮಾಯಿಯನ್ನು ಅಭ್ಯರ್ಥಿ ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬಸವರಾಜ ಬೊಮ್ಮಾಯಿಯವರ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಲು ನಮಗೆ ಒಬ್ಬರು ಬೇಕಿತ್ತು. ಭರತ್ ಬೊಮ್ಮಾಯಿ ಬಂದಿರುವುದು ಖುಷಿ ತಂದಿದೆ ಎಂದು ಜನ ಹೇಳುತ್ತಿದ್ದಾರೆ ಎಂದು ಹೇಳಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿರುವುದು ಕಣ್ಣಿಗೆ ಕಾಣಿಸುತ್ತಿದೆ. 2008 ರಲ್ಲಿ ಕ್ಷೇತ್ರ ಹೇಗಿತ್ತು, ಈಗ ಹೇಗೆ ಅಭಿವೃದ್ಧಿ ಆಗಿದೆ ಎನ್ನುವದನ್ನು ಜನರೇ ಹೇಳುತ್ತಾರೆ. ಮೊದಲು ಕುಡಿಯಲು ನೀರಿರಲಿಲ್ಲ. ಈಗ ಮನೆ ಮನೆಗೆ ನೀರು ಬಂದಿದೆ. ರಸ್ತೆ ಆಗಿದೆ. ಫ್ಯಾಕ್ಟರಿಗಳು ಬಂದಿವೆ. ಮಹಿಳೆಯರಿಗೆ ಉದ್ಯೋಗ ನೀಡಲು ಸಾಯಿ ತರುವಲ್ಲಿ ಭರತ್ ಬೊಮ್ಮಾಯಿ ಶ್ರಮ ಕಾರಣ, ಆರೋಪ ಮಾಡುವವರು ಕ್ಷೇತ್ರಕ್ಕೆ ಬಂದು ನೋಡಬೇಕು ಎಂದು ಹೇಳಿದರು.


