ಸಿನಿಮಾ ಸುದ್ದಿ

ಅಪ್ಪು ಬರ್ತ್ ಡೇ ಫ್ಯಾನ್ಸ್ ಫುಲ್ ಸೆಲೆಬ್ರೇಶನ್: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

Share It

ಬೆಂಗಳೂರು: ಮರೆಯಲಾಗದ ಮಾಣಿಕ್ಯ, ಕನ್ನಡಿಗರ ರತ್ನ ದಿವಂಗತ ಪವರ್ ಸ್ಟಾರ್ ಡಾ.ಪುನೀತ್‌ ರಾಜಕುಮಾರ್‌ ಅವರ 50 ನೇ ವರ್ಷದ ಹುಟ್ಟುಹಬ್ಬ. ನಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದುಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ ಮಿಡಿದು ಸ್ವಲ್ಪ ದಿನ, ತಿಂಗಳುಗಳವರೆಗೂ ನೆನದು ಮರೆತುಬಿಡುತ್ತಾರೆ. ಆದರೆ ಕನ್ನಡಿಗರ ಪ್ರೀತಿಯ ಮಗ ಅಪ್ಪು ವಿಷಯದಲ್ಲಿ ಅದು ಹಾಗಾಗಲಿಲ್ಲ. ಅಗಲಿ 4 ವರ್ಷವಾದರೂ ಇಂದಿಗೂ ಪ್ರತಿದಿನ ಕಂಬನಿ ಮಿಡಿಯುವವರಿದ್ದಾರೆ.

ಪ್ರತಿಯೊಂದು ಮನೆಯಲ್ಲಿ ತಮ ಮನೆ ಮಗನ ಜನದಿನವನ್ನು ಆಚರಿಸುವ ಹಾಗೆ ಕೇಕ್‌ ಕಟ್‌ ಮಾಡುವ ಮೂಲಕ ಪ್ರೀತಿ-ವಾತ್ಸಲ್ಯ ತೋರಿ ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನಿಗಳಲ್ಲಿ ಅವರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗಿಲ್ಲ. ಅನೇಕ ಮನೆಗಳ ದೇವರ ಮನೆಯಲ್ಲಿ ಇವರು ಪೂಜ್ಯನೀಯ ಸ್ಥಾನ ಪಡೆದಿದ್ದಾರೆ.

ಪ್ರತೀ ಜಾತ್ರೆ ತೇರುಗಳ ಮೇಲೆ ದೇವರ ಬಳಿ ಇವರ ಭಾವಚಿತ್ರ ಇಟ್ಟು ಪೂಜಿಸಲಾಗುತ್ತಿದೆ. ಆಡಿಯೋ, ಟೈಟಲ್‌‍, ಟ್ರೈಲರ್‌, ಟೀಸರ್‌ ಯಾವುದೇ ಸಿನಿಮಾ ಕಾರ್ಯಕ್ರಮಗಳಿದ್ದರೂ ಮೊದಲು ಪುನೀತ್‌ ಅವರನ್ನು ನೆನೆದು ಮುಂದಿನ ಕಾರ್ಯಕ್ರಮ ಶುರು ಮಾಡುವ ಪದ್ಧತಿ ರೂಢಿಯಲ್ಲಿದ್ದು, ಅಗಲಿ 4 ವರ್ಷವಾದರೂ ಇಂದಿಗೂ ಗಾಂಧಿನಗರದಲ್ಲಿ ನಡೆದುಕೊಳ್ಳುತ್ತಾ ಬಂದಿದೆ. ಬಿಡುಗಡೆಯಾಗುವ ಪ್ರತೀ ಚಿತ್ರದಲ್ಲಿ ಮೊದಲಿಗೆ ಅವರ ಬಗ್ಗೆ ಅಭಿಮಾನದ ನುಡಿಗಳನ್ನು ಬರೆಯಲಾಗಿರುತ್ತದೆ. ಅಷ್ಟರಮಟ್ಟಿಗೆ ಗಾಂಧಿನಗರ ಅಪ್ಪು ಅವರನ್ನು ನೆನಪುಗಳ ಮೂಲಕ ಜೀವಂತವಾಗಿರಿಸಿದೆ.

ಇಂದು ಹಳ್ಳಿ, ಪಟ್ಟಣ, ನಗರಗಳ ಮೂಲೆಮೂಲೆಗಳಲ್ಲೂ ಪುನೀತ್‌ ರಾಜಕುಮಾರ್‌ ಭಾವಚಿತ್ರಗಳ ದೊಡ್ಡ ದೊಡ್ಡ ಕಟೌಟ್‌ ಗಳು ಹೂವುಗಳಿಂದ ಅಲಂಕೃತಗೊಂಡು ರಾರಾಜಿಸುತ್ತಿವೆ. ಪುನೀತ್‌ ಸಮಾಧಿಯ ಬಳಿ ಸಾವಿರಾರು ಅಭಿಮಾನಿಗಳು ಕೈಯಲ್ಲಿ ಕೇಕುಗಳನ್ನ ಹಿಡಿದು ತಂಡೋಪ ತಂಡವಾಗಿ ಬಂದು ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎದೆ ಭಾರಮಾಡಿಕೊಂಡು ಆಚರಿಸುತ್ತ, ಜೈ ಅಪ್ಪು, ಅಪ್ಪು ಅಮರ,ಅಪ್ಪು ಮತ್ತೆ ಹುಟ್ಟಿ ಬಾ, ಘೋಷಣೆಗಳನ್ನು ಕೂಗುತ್ತಾ ಮತ್ತೊಮೆ ಸಮಾಧಿಯ ದರ್ಶನವನ್ನು ಮಾಡುತ್ತಾ ಕಣ್ಣೀರು ಸುರಿಸುತ್ತಾ ಸಾಗುತ್ತಿದ್ದಾರೆ.

ಇಂದೂ ಕೂಡ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಸಮಾಧಿಯ ಬಳಿ ಬಂದು ದರ್ಶನ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್‌ ಮಾಡುತ್ತಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಡಾ.ರಾಜ್‌ಕುಮಾರ್‌ ಕುಟುಂಬಸ್ಥರು ಸಮಾಧಿಯ ಬಳಿ ಬಂದು ಪ್ರೀತಿಯ ಮನೆಮಗನನ್ನು ಪೂಜಿಸಿದ್ದಾರೆ.

ರಾಜ್ಯಾದ್ಯಂತ ಸಾವಿರಾರು ದೇವಸ್ಥಾನಗಳಲ್ಲಿ ಪುನೀತ್‌ ಹೆಸರಿನ ಮೇಲೆ ಹೋಮ, ಹವನ, ಅಭಿಷೇಕ ಕೈಂಕರ್ಯಗಳು ನಡೆಯುತ್ತಿದ್ದು, ಅನ್ನ ದಾಸೋಹ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ಜರುಗುತ್ತಿವೆ. ಇದಷ್ಟೇ ಅಲ್ಲದೆ ಪುನೀತ್‌ ಅಭಿಮಾನಿಗಳ ಸಂಘಗಳು ಮತ್ತು ವಿವಿಧ ಸಂಘಟನೆಗಳು ಇಂದು ನೇತ್ರದಾನ ಅರಿವು ಕಾರ್ಯಕ್ರಮ, ರಕ್ತದಾನ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರಗಳು,ಅಂಗಾಂಗ ದಾನ, ಬಡ ಶಾಲಾ ಮಕ್ಕಳಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮಿಕೊಂಡು ಅಪ್ಪು ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಮಹಿಳೆಯರಿಗೆ ಅಪ್ಪು ಎಂದರೆ ಪಂಚಪ್ರಾಣ. ಪ್ರತಿಯೊಂದು ಮನೆ-ಮನೆಯಲ್ಲಿ ಅಣ್ಣ, ತಮ್ಮ, ಮಗನಂತೆ ಮನೆಯ ಸದಸ್ಯನಾಗಿ ಆರಾಧಿಸುವ ಇವರು ಕುಟುಂಬಸ್ಥರೊಂದಿಗೆ ಅಪ್ಪು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅವರು ಅಗಲಿದ ಮೇಲೆ ಅನೇಕ ತಾಯಂದಿರು ತಮ ಮಕ್ಕಳು ಅಪ್ಪುವಿನಂತೆ ಆಗಬೇಕೆಂದು ಅವರ ಹೆಸರಿಟ್ಟಿದ್ದಾರೆ. ಇದು ಇವರ ಮೇಲಿನ ಅಭಿಮಾನಕ್ಕೆ ಮತ್ತೊಂದು ಉದಾಹರಣೆ.

ಅಪ್ಪು ಯಾವಾಗಲೂ ಬಾಕ್‌್ಸ ಆಫೀಸ್‌‍ನ ಸುಲ್ತಾನನಾಗಿದ್ದ. ಇತ್ತೀಚೆಗೆ ಅವರು ಇಲ್ಲದಿದ್ದರೂ ಅದು ಮತ್ತೆ ಸಾಬೀತಾಗಿದೆ. ಏಕೆಂದರೆ 23 ವರ್ಷಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡಮಟ್ಟಿಗೆ ಸೌಂಡ್‌ ಮಾಡಿ, ಕನ್ನಡ ಚಿತ್ರರಂಗಕ್ಕೆ ಅಪರೂಪದ ಮುತ್ತನ್ನ ಕೊಟ್ಟ, ಪುನೀತ್‌ ಅಭಿನಯದ ಮೊದಲ ಚಿತ್ರ ಅಪ್ಪು ಸಿನಿಮಾ ಈ ವಾರ ಮತ್ತೆ ತೆರೆಕಂಡು ಭರ್ಜರಿ ಪ್ರದರ್ಶನವಾಗುತ್ತಿದ್ದು, ಅಭಿಮಾನಿಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ. ಒಂದೇ ದಿನದಲ್ಲಿ ಕೋಟಿ ಕೋಟಿ ಹಣ ಥಿಯೇಟರ್‌ಗಳಿಂದ ಕಲೆಕ್ಷನ್‌ ಆಗುತ್ತಿದೆ. ಅದಕ್ಕೆ ಅಪ್ಪು ಕನ್ನಡಿಗರ ಹೃದಯಗಳಲ್ಲಿ ಅಜರಾಮರವಾಗಿ ನಿಂತಿದ್ದಾರೆ.


Share It

You cannot copy content of this page