ಸುದ್ದಿ

ದೇಸಿ ಹಸುಗಳನ್ನು ರಾಜ್ಯಮಾತೆ- ಗೋಮಾತೆಯೆಂದು ಘೋಷಿಸಿದ ಮಹಾರಾಷ್ಟ್ರ ಸರಕಾರ

Share It

ಮುಂಬೈ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರಕಾರ ಇದೀಗ ದೇಸಿ ಹಸುಗಳನ್ನು ರಾಜ್ಯಮಾತೆ- ಗೋಮಾತೆಯೆಂದು ಮಹತ್ವದ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಎನ್‌ಡಿಎ ಸರಕಾರ ಈ ಘೋಷಣೆ ಹೊರಡಿಸಿದೆ. ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆ ಪರಿಗಣಿಸಿ ಇದೀಗ ರಾಜ್ಯಮಾತೆ- ಗೋಮಾತೆ ಎಂದು ಘೋಷಣೆ ಮಾಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಾನವನ ಪೋಷಣೆಯಲ್ಲಿ ದೇಸಿ ಹಸುಗಳ ಹಾಲಿನ ಪ್ರಾಮುಖ್ಯತೆ, ಆಯುರ್ವೇದ ಹಾಗೂ ಪಂಚಗವ್ಯ ಚಿಕಿತ್ಸೆ ಹಾಗೂ ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ ಬಳಕೆ ಮುಂತಾದ ಅಂಶ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ದೇಸಿ ಹಸುಗಳು ರೈತರಿಗೆ ವರದಾನವಾಗಿವೆ. ಈ ಹಿನ್ನೆಲೆಯಲ್ಲಿ ಅವುಗಳಿಗಿರುವ ಪ್ರಾಮುಖ್ಯತೆ ಗಮನಿಸಿ ಮಹಾರಾಷ್ಟ್ರ ಸರಕಾರ ಇದೀಗ ಈ ಘೋಷಣೆ ಹೊರಡಿಸಿರುವುದಾಗಿ ಉಪಮುಖ್ಯಮಂತ್ರಿ ದೇವೇಂದ್ರ
ಫಡ್ನವಿಸ್ ತಿಳಿಸಿದ್ದಾರೆ. ಗೋ ಶಾಲೆಗಳಲ್ಲಿ ದೇಸಿ ಹಸುಗಳ ಉತ್ತೇಜನಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೋ ಮಾತೆ ಭಾರತೀಯ ಪ್ರಾಚೀನ ಇತಿಹಾಸದಲ್ಲಿಯೂ ಸಾಂಸ್ಕೃತಿಕವಾಗಿ, ವೈಜ್ಞಾನಿಕಾವಾಗಿ, ಆಧ್ಯಾತ್ಮಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ವೇದಗಳ ಕಾಲದಿಂದಲ್ಲೂ ಗೋವಿನ ಪೂಜೆ ನಡೆಯುತ್ತಿತ್ತು. ಪವಿತ್ರ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತಾ ಎಂದು ಏಕನಾಥ ಶಿಂಧೆ ಘೋಷಿಸಿದ್ದಾರೆ.
ಭಾರತದ ಅಮೂಲ್ಯ ಗೋವಿನ ತಳಿಯನ್ನು ನಾವು ಪೂಜಿಸುತ್ತೇವೆ. ಗೋವು ನಮಗೆ ತಾಯಿ. ಗೋವಿನ ಹಾಲು ಪ್ರತಿಯೊಬ್ಬರ ಆರೋಗ್ಯಕ್ಕೆ ಅತೀ ಮುಖ್ಯ. ಗೋವಿನ ಸೆಗಣಿ ಹಾಗೂ ಗಂಜಲ ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿದೆ. ಹಲವು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಪೂಜ್ಯನೀಯ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತೆಯಾಗಿ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಭಾರತದಲ್ಲಿ ದೇಶಿಯ ತಳಿಗಳು ಸಂಖ್ಯೆ ಕುಸಿಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಶಿಂಧೆ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಅಧಿಕೃತ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಭಾರತೀಯ ಗೋವುಗಳ ತಳಿಗಳನ್ನು ಸಂರಕ್ಷಿಸುವ, ಬೆಳೆಸುವ ಕೆಲಸವಾಗಬೇಕು. ರೈತರಿಗ ದೇಶಿ ತಳಿಗಳ ಸಾಕಣೆಗೆ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದ್ದಾರೆ.


Share It

You cannot copy content of this page