ಹೊಸಕೋಟೆ: ನಿಧಿ ಆಸೆಗೆ 8 ತಿಂಗಳ ಗಂಡು ಮಗುವನ್ನು ಬಲಿ ಕೊಡುವ ಯತ್ನ ನಡೆಯುತ್ತಿದೆ ಎಂಬ ದೂರಿನ ಮೇಲೆ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ತಂಡ ದಾಳಿ ಮಾಡಿ, ಮಗುವನ್ನು ರಕ್ಷಿಸಲಾಗಿದೆ.
ಇಂತಹದ್ದೊಂದು ಅಮಾನವೀಯ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ನಡೆದಿದೆ. ಸಯ್ಯದ್ ಇಮ್ರಾನ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಮಗುವನ್ನು ರಕ್ಷಿಸಲಾಗಿದೆ. ಮನೆಯೊಳಗೆ ತೆಗೆದಿದ್ದ ಗುಂಡಿ, ಪೂಜಾ ಸಾಮಗ್ರಿಗಳು ಸಂಶಯವನ್ನು ಹೆಚ್ಚಿಸಿವೆ.
ಮಗುವನ್ನು ದತ್ತು ಪಡೆದು ಸಾಕುತ್ತಿದ್ದೇವೆ ಎಂದು ಪೋಷಕರು ತಿಳಿಸಿದ್ದು, ಯಾವುದೇ ಕಾನೂನು ಪ್ರಕಾರದ ಪ್ರಕ್ರಿಯೆಗಳು ನಡೆದಿಲ್ಲ. ಹೀಗಾಗಿ, ಮಗುವನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಪೋಷಕರ ವಿಚಾರಣೆ ನಂತರ ಸೂಕ್ತ ವಿವರಣೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ.

