ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಎಸ್. ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಪ್ರಕರಣದಲ್ಲಿ ನೊಟೀಸ್ ನೀಡದ ಬಂಧನ ಮಾಡಲಾಗಿದೆ. ಎಸ್.ಸಿ, ಎಸ್.ಟಿ. ಪ್ರಕರಣದಡಿ ಬಂಧನ ಮಾಡುವಂತಹ ಯಾವುದೇ ಘಟನೆ ಪ್ರಕರಣದಲ್ಲಿ ನಡೆದಿಲ್ಲ. ಆದರೂ, ಏಕಾಏಕಿ ಬಂಧಿಸಲಾಗಿದೆ ಎಂದು ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.
ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲ. ಏಕೆಂದರೆ, ಆಡಳಿತದಲ್ಲಿ ಇರುವುದು ಬೇರೆ ಪಕ್ಷ. ಹೀಗಾಗಿ, ಜಾಮೀನು ನೀಡಬೇಕು. ಅಗತ್ಯ ವಿಚಾರಣೆಗೆ ಸಹಕಾರ ನೀಡುವ ಹೊಣೆಗಾರಿಕೆ ನಮ್ಮದು ಎಂದು ವಿನಂತಿ ಮಾಡಿಕೊಂಡರು.
ಸರಕಾರದ ಪರ ವಾದ ಮಂಡನೆ ಮಾಡಿದ ಎಸ್ ಪಿ ಪಿ, ಪ್ರದೀಪ್, ದೂರುದಾರರ ಮೇಲೆ ನಿರಂತರ ಒಂಬತ್ತು ವರ್ಷದಿಂದ ದೌರ್ಜನ್ಯ ನಡೆಯುತ್ತಿದೆ. ಅನೇಕ ಬಾರಿ ಕೂಡಿ ಹಾಕಿ ಹಿಂಸೆ ಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವಾಚ್ಯ ಶಬ್ದಗಳನ್ನು ಬಳಸಿ, ನಿಂದನೆ ಮಾಡಿದ್ದಾರೆ. ಹೀಗಾಗಿ, 2015 ರ ದಿನಾಂಕವನ್ನು ನಮೂದು ಮಾಡಲಾಗಿದೆ ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿರುವ ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ…