ಬೆಂಗಳೂರು: ಅರ್ಚಕರು ಮತ್ತು ಗುರುದ್ವಾರದ ಪೂಜಾರಿಗಳಿಗೆ ಮಾಸಿಕ 18 ಸಾವಿರ ರು. ಗೌರವಧನ ಒದಗಿಸುವ ಘೋಷಣೆಯನ್ನು AAP ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಮಾಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಸರಕಾರದ ಭರವಸೆಗಳ ಪಟ್ಟಿ ಬಿಡುಗಡೆ ಮಾಡಿರುವ ಅವರು, ‘ಪೂಜಾರಿ ಗ್ರಂಥಿ ಸಮ್ಮಾನ್’ ಘೋಷಣೆ ಮಾಡಿದ್ದಾರೆ. ಯೋಜನೆಯ ಪ್ರಕಾರ ಹಿಂದೂ ದೇವಾಲಯಗಳ ಪೂಜಾರಿಗಳು ಹಾಗೂ ಸಿಖ್ ಗುರುದ್ವಾರಗಳ ಅರ್ಚಕರಿಗೆ ಮಾಸಿಕ 18 ಸಾವಿರ ರು. ನೀಡುವ ಘೋಷಣೆ ಮಾಡಿದ್ದಾರೆ.
ಯೋಜನೆಗಾಗಿ ಅರ್ಚಕರನ್ನು ನೋಂದಾಯಿಸಲು ಸಚಿವರು, ಶಾಸಕರು, ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ರಾಜಧಾನಿಯಾದ್ಯಂತ ದೇವಾಲಯಗಳು ಮತ್ತು ಗುರುದ್ವಾರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆ ನಂತರ ನೋಂದಣಿಗಾಗಿ ಕಾಂಗ್ರೆಸ್ ಬಳಸಿದ ತಂತ್ರವನ್ನು ಆಪ್ ದೆಹಲಿಯಲ್ಲಿ ಬಳಸಲಿದೆ. ಈ ನಡುವೆ ಯೋಜನೆಗೆ ನೋಂದಣಿ ಮಾಡಲು ಆಪ್ ಕಾರ್ಯಕರ್ತರು ಮುಂದಾಗಿದ್ದು, ಕನ್ನಾಟ್ ಪ್ಲೇನ್ ಆಂಜನೇಯ ದೇವಸ್ಥಾನದಲ್ಲಿ ನೋಂದಣಿಗೆ ಚಾಲನೆ ದೊರೆಯಲಿದೆ.
ಪೂಜಾರಿಗಳು ಮತ್ತು ಗ್ರಂಥಿಗಳು ದೇವರು ಮತ್ತು ನಮ್ಮ ನಡುವೆ ಸೇರುವೆಯಾಗಿದ್ದಾರೆ. ನಮ್ಮ ಸುಖ ಮತ್ತು ದುಃಖದ ಸಂದರ್ಭದಲ್ಲಿ ಅವರು ನಮ್ಮ ಜತೆಗಿರುತ್ತಾರೆ. ಹೀಗಾಗಿ, ಅವರನ್ನು ಗುರುತಿಸುವ ಕೆಲಸಕ್ಕೆ ನಮ್ಮ ಪಕ್ಷ ಮುಂದಾಗಿದೆ. ಬಿಜೆಪಿ ಇದನ್ನು ವಿರೋಧಿಸುತ್ತಿದ್ದು, ಇದರಿಂದ ಅವರಿಗೆ ಪಾಪ ಸುತ್ತಿಕೊಳ್ಳಲಿದೆ ಎಂದು ಕೇಜ್ರೀವಾಲ್ ಎಚ್ಚರಿಕೆ ನೀಡಿದ್ದಾರೆ.