ಪ್ರಧಾನಿ ನರೇಂದ್ರ ಮೋದಿಯವರ 119ನೇ ಮನ್ ಕಿ ಬಾತ್ ಸಂಚಿಕೆ ಇಂದು ಪ್ರಸಾರವಾಯಿತು.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ಕರ್ನಾಟಕದ ಜನಪದ ಕಲೆಯಾಗಿರುವ “ಹುಲಿ ವೇಷ ಕುಣಿತ”ವನ್ನು ಉಲ್ಲೇಖಿಸುವುದರ ಜೊತೆಗೆ ಹುಲಿ ವೇಷ ಹಾಕುವವರನ್ನೂ ಹಾಡಿ ಹೊಗಳಿದರು.
“ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಇದು ವಿಶೇಷ ಹಾಗೂ ಗಮನ ಸೆಳೆಯುವ ಕಾರ್ಯಕ್ರಮವಾಗಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಬಿಆರ್ಟಿ ಅರಣ್ಯವಿದೆ. ಬಿಆರ್ಟಿ ಅರಣ್ಯ ಅತಿಹೆಚ್ಚು ಹುಲಿಗಳಿರುವ ಪ್ರದೇಶವಾಗಿದೆ. ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ದೊಡ್ಡದಿದೆ. ಹುಲಿಗಳನ್ನು ಉಳಿಸಿರುವ ಕ್ರೆಡಿಟ್ ಸ್ಥಳೀಯ ಸೋಲಿಗರಿಗೆ ಸಲ್ಲಬೇಕು. ಈಗಲೂ ಪ್ರಾಣಿ-ಮಾನವನ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ” ಎಂದು ಪ್ರಸಂಶಿಸಿದರು.
ಪ್ರಧಾನಿ ಮೋದಿಯವರು ಆರೋಗ್ಯದ ಕುರಿತು ದೇಶದ ಜನರಿಗೆ ಕೆಲವು ಟಿಪ್ಸ್ ನೀಡಿದ್ದಾರೆ.
“ದೇಹದ ಬೊಜ್ಜು ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. 8 ಜನರ ಪೈಕಿ ಒಬ್ಬರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಶೇಕಡಾ 4ರಷ್ಟು ಇದೆ. ಅಡುಗೆ ಎಣ್ಣೆ ಕಡಿಮೆ ಬಳಕೆಯಿಂದ ಬೊಜ್ಜು ತಗ್ಗಿಸಬಹುದು. ಆಹಾರದಲ್ಲಿ ಶೇ.10 ಕಡಿಮೆ ಅಡುಗೆ ಎಣ್ಣೆ ಬಳಸಲು ಸಲಹೆ. ದೇಶದಲ್ಲಿ ಬೊಜ್ಜಿನ ಸಮಸ್ಯೆ ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದೆ” ಆತಂಕ ವ್ಯಕ್ತಪಡಿಸಿದರು.