ಸಾಂಸ್ಕ್ರತಿಕ ನಗರಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾರ್ಯ ಶೀಘ್ರದಲ್ಲೇ ಆರಂಭ

Share It

  • 14 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ ಆಧುನಿಕ ಬಸ್ ನಿಲ್ದಾಣ
  • ಸಿಎಂ ಸಿದ್ದರಾಮಯ್ಯ ಅವರಿಂದ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ

ಮೈಸೂರು: ನಗರದ ಹೃದಯ ಭಾಗದ ಇಕ್ಕಟ್ಟಾದ ಜಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣ (ಸಬ್ ಅರ್ಬನ್)ದ ಮೇಲಿನ ಒತ್ತಡ ತಗ್ಗಿಸಿ, ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬನ್ನಿಮಂಟಪ ಡಿಪೋ ಪಕ್ಕದ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿದರೆ ಅತೀ ಹೆಚ್ಚಾಗಿ ಜನಸಂದಣಿ ಕಾಣಸಿಗುವ ಬಸ್ ನಿಲ್ದಾಣ ಮೈಸೂರು ಬಸ್ ನಿಲ್ದಾಣ . ಅದರಲ್ಲೂ ವಿಶೇಷವಾಗಿ ವಿಶ್ಚವಿಖ್ಯಾತ ದಸರಾ ಸಮಯದಲ್ಲಿ ಉಂಟಾಗುವ ಜನಸಂದಣಿಗೆ ಅನುಗುಣವಾಗಿ ಬಸ್ಸುಗಳ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರಿಗೆ ವ್ಯವಸ್ಥಿತ ಸಾರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ಉದ್ದೇಶಿತ ಹೊಸ ಬಸ್ ನಿಲ್ದಾಣದಿಂದ ಈಡೇರಲಿದೆ .

ಪ್ರಸ್ತುತ ಸರಾಸರಿ 2100 ಟ್ರಿಪ್ ಗಳನ್ನು ಈ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನು 10 ವರ್ಷಗಳ ಅಂತರದಲ್ಲಿ 2500 ರಿಂದ 3000 ಟ್ರಿಪ್ ಗಳಿಗೆ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ. ಹಾಲಿಯಿರುವ 30 ಬಸ್ ಬೇಗಳು ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ಇದು ಸಾಲದಾಗಿದೆ. ಹೊಸ ಯೋಜಿತ ಬಸ್ ನಿಲ್ದಾಣದಲ್ಲಿ 75 ಬಸ್ ಬೇ ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳು, ಬೇಬಿ ಕೇರ್ ಸೆಂಟರ್, ಚಾಲನಾ ಸಿಬ್ಬಂದಿಯ ವಿಶ್ರಾಂತಿ ಗೃಹಗಳ ವ್ಯವಸ್ಥೆ ಇರಲಿದೆ.

ಬನ್ನಿಮಂಟಪ ಕೆಎಸ್‌ ಆರ್‌ಟಿಸಿ ಡಿಪೋಗೆ ಸೇರಿದ 61 ಎಕರೆ ಜಾಗದ ಪೈಕಿ 14 ಎಕರೆ ವಿಸ್ತೀರ್ಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆ‌ರ್) ಸಿದ್ಧಪಡಿಸಿ, ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಬನ್ನಿಮಂಟಪದಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

Oplus_131072

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚರ್ಚೆ ನಡೆಸಿದ್ದು, ಯೋಜನಾ ನಕ್ಷೆ, ಕಾಮಾಗಾರಿ ವಿವರ ಪರಾಮರ್ಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರ್ವಜನಿಕ ಪ್ರಯಾಣಿಕರಿಗೆ ಸುವ್ಯವಸ್ಥಿತ ಸಾರಿಗೆ ಸೌಲಭ್ಯ ನೀಡಲು ಉದ್ದೇಶಿತ ಬಸ್ ನಿಲ್ದಾಣದ ಅಗತ್ಯವಿರುವುದಾಗಿ DULT ಸಂಸ್ಥೆಯ ಹಣಕಾಸು ನೆರವಿನಿಂದ ಅನುದಾನ ನೀಡಲು ಸೂಚಿಸಿದ್ದು, 2025 ಸಾಲಿನಲ್ಲಿ ನೂತನ ಬಸ್‌ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ.

ಬನ್ನಿಮಂಟಪದ ಉದ್ದೇಶಿತ ನೂತನ ಬಸ್ ನಿಲ್ದಾಣದಲ್ಲಿ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಕರ್ನಾಟಕದ ದೂರದ ನಗರಗಳು ಹಾಗೂ ಅಂತಾರಾಜ್ಯ ಸಾರಿಗೆ ಬಸ್‌ಗಳು ಬಂದು ಹೋಗಲು ವ್ಯವಸ್ಥೆ ಕಲ್ಪಿಸುವುದು. ಸದ್ಯ ಕಾರ್ಯಾಚರಣೆಯಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣವನ್ನು ಸಂಪೂರ್ಣ ಸ್ಥಳಾಂತರ ಮಾಡದೆ ಹಾಗೆಯೇ ಉಳಿಸಿಕೊಂಡು, 2024ರ ಜನವರಿ 1ರಂದು ಮೈಸೂರು ವಿಭಾಗದಿಂದ ಪ್ರತ್ಯೇಕವಾಗಿ ರಚಿಸಿರುವ ಮೈಸೂರು ಗ್ರಾಮಾಂತರ ವಿಭಾಗಕ್ಕೆ ಬಳಸಿಕೊಳ್ಳುವ ಮೂಲಕ ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ನೂತನ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್‌ ನಿಲ್ದಾಣದ ನಡುವೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಪ್ರಸ್ತುತ ಇರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲೆ ಹೆಚ್ಚಿನ ಸಂಚಾರ ಒತ್ತಡ: ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗವು 6 ಬಸ್‌ ಡಿಪೋ, ಮೈಸೂರು ನಗರ ವಿಭಾಗವು 4 ಡಿಪೋ ಸೇರಿ ಜಿಲ್ಲೆಯಲ್ಲಿ ಒಟ್ಟು 10 ಬಸ್‌ ಡಿಪೋಗಳು ಹಾಗೂ ಎರಡೂ ವಿಭಾಗಗಳ ವ್ಯಾಪ್ತಿಯಲ್ಲಿ 31 ಬಸ್ ನಿಲ್ದಾಣಗಳನ್ನು ಹೊಂದಿದ್ದು, 1,400 ಬಸ್‌ಗಳು ಇಲ್ಲಿಂದ 1,213 ಅನುಸೂಚಿಗಳಲ್ಲಿ ಕಾರ್ಯಾಚರಣೆ ಮಾಡಿಸಲಾಗುತ್ತದೆ.

ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ
ಗ್ರಾಮಾಂತರ ಬಸ್ ನಿಲ್ದಾಣವು ಚಿಕ್ಕದಾಗಿರುವುದರಿಂದ ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೋದ 14 ಎಕರೆ ಜಾಗದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಪರಿಕಲ್ಪಿತ ನಕ್ಷೆಗೆ ಅನುಮೋದನೆ ಪಡೆದಿದ್ದು ವಿವರವಾದ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಉದ್ದೇಶಿತ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ.

ವಿಶೇಷತೆಗಳು:

  • ತಳಮಹಡಿಯಲ್ಲಿ ದ್ವಿಚಕ್ರವಾಹನ, ಕಾರುಗಳ ನಿಲುಗಡೆ,
  • ನೆಲ ಮಹಡಿಯಲ್ಲಿ ಬಸ್ ನಿಲ್ದಾಣ, ಕಚೇರಿ ಕೊಠಡಿಗಳು ವಿದ್ಯುತ್‌ ಚಾಲಿತ ಬಸ್‌ಗಳ ರೀಚಾರ್ಜ್ ಪಾಯಿಂಟ್‌ಗಳು ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳು, ಶೌಚಾಲಯ ವಾಣಿಜ್ಯ ಮಳಿಗೆ ನಿರ್ಮಾಣ
  • ಮೊದಲ ಅಂತಸ್ತಿನಲ್ಲಿ ವಿಭಾಗೀಯ ಕಚೇರಿಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ .
  • ಎರಡನೇ ಅಂತಸ್ತಿನಲ್ಲಿ ಮಲ್ಟಿ ಪ್ಲೆಕ್ಸ್ ಚಿತ್ರ ಮಂದಿರಗಳು ಹಾಗೂ ಫುಡ್ ಕೋರ್ಟ್ ಮತ್ತು ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ.

Share It

You May Have Missed

You cannot copy content of this page